ADVERTISEMENT

ಬೆಳಗಾವಿ: ‘ಅಹಿಂದ’ ನಾಯಕರ ‘ಡಿನ್ನರ್‌ ಪಾರ್ಟಿ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 4:10 IST
Last Updated 11 ಡಿಸೆಂಬರ್ 2025, 4:10 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಳಗಾವಿ: ಇಷ್ಟು ದಿನ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಅಹಿಂದ ನಾಯಕರ ‘ಡಿನ್ನರ್‌ ಪಾರ್ಟಿ’ ಬುಧವಾರ ಬೆಳಗಾವಿಯಲ್ಲೂ ಮುಂದುವರಿಯಿತು. ಮುಖ್ಯಮಂತ್ರಿ ಕುರ್ಚಿ ಕದನ ನಡೆದಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರೆಲ್ಲರೂ ರಾತ್ರಿ ಊಟಕ್ಕೆ ಒಂದೆಡೆ ಸೇರಿದ್ದು, ಮತ್ತೊಂದು ಚರ್ಚೆಗೆ ಪುಷ್ಠಿ ನೀಡಿತು.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಫಿರೋಜ್‌ ಸೇಠ್‌ ಹಾಗೂ ಶಾಸಕ ಆಸಿಫ್‌ ಸೇಠ್‌ ಅವರ ಮನೆಯಲ್ಲಿ ಬುಧವಾರ ರಾತ್ರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ ಜಾರಕಿಹೊಳಿ, ಎಚ್‌.ಸಿ.ಮಹಾದೇವಪ್ಪ, ಜಮೀರ್‌ ಅಹಮದ್‌ ಖಾನ್, ಭೈರತಿ ಸುರೇಶ್, ಎಂ.ಸಿ.ಸುಧಾಕರ, ರಹೀಂ ಖಾನ್‌, ಕೆ.ಜೆ.ಜಾರ್ಜ್‌, ಶಾಸಕರಾದ ಖನೀಜ್‌ ಫಾತಿಮಾ, ಸಲೀಂ ಅಹಮದ್‌, ಹ್ಯಾರಿಸ್‌ ಹಾಗೂ ಕೆಲವು ಶಾಸಕರೂ ಈ ಊಟೋಪಚಾರದಲ್ಲಿ ಭಾಗಿಯಾದರು.

ADVERTISEMENT

‘ಐದು ವರ್ಷ ನಮ್ಮ ತಂದೆಯೇ ಮುಖ್ಯಮಂತ್ರಿ’ ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ, ಡಿ.ಕೆ.ಶಿವಕುಮಾರ್‌ ಬಳಗದ ಕೆಲವರು ಸಚಿವರು, ಶಾಸಕರು ತಿರುಗೇಟು ನೀಡಿದ್ದರು. ಈ ಚರ್ಚೆ ಬಿಸಿಯಾಗಿರುವಾಗಲೇ ಅಹಿಂದ ನಾಯಕರು ಗುಂ‍ಪುಗೂಡಿದ್ದಾರೆ.

‘ಈ ರೀತಿ ಪ್ರತಿವರ್ಷವೂ ಎಲ್ಲರನ್ನೂ ಊಟಕ್ಕೆ ಕರೆಯುತ್ತೇವೆ. ಇದರಲ್ಲಿ ಯಾವುದೇ ಉದ್ದೇಶ ಇಲ್ಲ’ ಎಂದು ಫಿರೋಜ್‌ ಸೇಠ್‌ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.