ADVERTISEMENT

ಮೂಡಲಗಿ: ದುರದುಂಡೀಶ್ವರ ಪಲ್ಲಕ್ಕಿ ಉತ್ಸವಕ್ಕೆ ಅರಭಾವಿಮಠ ಸಜ್ಜು

ಬಾಲಶೇಖರ ಬಂದಿ
Published 30 ಮಾರ್ಚ್ 2025, 5:34 IST
Last Updated 30 ಮಾರ್ಚ್ 2025, 5:34 IST
ಮೂಡಲಗಿ ತಾಲ್ಲೂಕಿನ ಅರಭಾವಿಯ ದುರದುಂಡೀಶ್ವರ ಮಠದ ವಿಹಂಗಮ ನೋಟ
ಮೂಡಲಗಿ ತಾಲ್ಲೂಕಿನ ಅರಭಾವಿಯ ದುರದುಂಡೀಶ್ವರ ಮಠದ ವಿಹಂಗಮ ನೋಟ   

ಮೂಡಲಗಿ: ಪವಾಡ ಪುರುಷರಾದ ಜಗದ್ಗುರು ದುರದುಂಡೀಶ್ವರರ ಜಾತ್ರೆ ಪ್ರಯುಕ್ತ, ಮಾ.31ರಂದು ಅದ್ದೂರಿಯಾಗಿ ಜರುಗಲಿರುವ ಪಲ್ಲಕ್ಕಿ ಉತ್ಸವಕ್ಕೆ ತಾಲ್ಲೂಕಿನ ಅರಭಾವಿಯ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠ ಸಜ್ಜಾಗಿದೆ. 

ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಿಗ್ಗೆ 11ಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಲಿದ್ದು, ಅರಭಾವಿ, ದುರದುಂಡಿ, ಸತ್ತಿಗೇರಿ ತೋಟ, ಶಿಂಧಿಕುರಬೇಟ ಮತ್ತಿತರ ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.

ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದ ಅರಭಾವಿಯ ದುರದುಂಡೀಶ್ವರ ಮಠವು ಜಾಗೃತ ಸ್ಥಳವಾಗಿದೆ. ದಾಸೋಹ, ಆಧ್ಯಾತ್ಮಿಕ ಚಿಂತನೆ, ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಗಳ ಮೂಲಕ ತ್ರಿವಿಧ ದಾಸೋಹದ ತಾಣವಾಗಿದೆ. ಸರ್ವಭಕ್ತರು ಸೇರುವ ಭಾವೈಕ್ಯದ ಕ್ಷೇತ್ರ ಎನಿಸಿದೆ.

ADVERTISEMENT

ಆರು ಶತಮಾನಗಳ ಇತಿಹಾಸ:

600 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿದ ದುರದುಂಡೀಶ್ವರರ ಮೂಲನಾಮ ಶಿವಲಿಂಗೇಶ್ವರ ಎಂದು ಪುರಾಣದಲ್ಲಿ ಉಲ್ಲೇಖವಿದೆ. ಬಾಲ್ಯದಲ್ಲಿ ಶಿವಲಿಂಗೇಶ್ವರರು ವೈರಾಗ್ಯ ತಾಳಿ ಹಿಮಾಲಯದಲ್ಲಿ ತಪಸ್ಸುಗೈದು ಲೋಕಸಂಚಾರ ಮಾಡುತ್ತ, ಅರುಣಾಚಲ ಪ್ರದೇಶದ ಕುಂಭಳೇಶ್ವರರ ಆಜ್ಞೆಯಂತೆ ಮಹಾರಾಷ್ಟ್ರದ ಢಪಳಾಪುರಕ್ಕೆ ಆಗಮಿಸಿದರು. ಅಲ್ಲಿ ಗುರುಲಿಂಗೇಶ್ವರರಿಂದ ಯೋಗಾಂಗ ಲಕ್ಷಣ, ಶಿವಯೋಗಿ ಸಿದ್ಧಾಂತ, ಅಂಗಲಿಂಗ ಸಾಮರಸ್ಯ ಮೂಲ ಸೇರಿದಂತೆ ಹಲವು ವಿದ್ಯೆ ಕಲಿತರು. ಅಲ್ಲಿಂದ ತೇರದಾಳದ ಅಲ್ಲಮಪ್ರಭು ಆಶ್ರಮದಲ್ಲಿ ಕೆಲ ಅವಧಿ ಕಳೆದರು. ಪ್ರಭುಗಳ ಅಣತಿಯಂತೆ ಘಟಪ್ರಭಾ ನದಿ ತೀರದಲ್ಲಿನ(ಈಗಿನ ಗೋಕಾಕ ಜಲಪಾತ) ಮಹಾಲಿಂಗಾಲಯ ಗಿರಿಗೆ ಬಂದು ನೆಲೆಸಿದರು. ಅಲ್ಲಿಂದ ಸಂಚಾರಗೈಯುತ್ತ ದುರದುಂಡಿಯಲ್ಲಿ ಹರಿಯುತ್ತಿರುವ ಹಳ್ಳದ ತಟದಲ್ಲಿ ಬಂದುನೆಲೆಸಿ ದುರದುಂಡೀಶ್ವರರಾದರು. ಅವರು ಲಿಂಗೈಕ್ಯರಾದ ಸ್ಥಳವೇ ಈಗಿನ ಅರಭಾವಿಯ ಮಠವಾಗಿದೆ. ಕಿತ್ತೂರು ದೊರೆ ಮಲ್ಲಸರ್ಜನ ಅವರಿಗೆ ಲಿಂಗಾಂಗ ಸಾಮರಸ್ಯ ತೋರಿದ ತಾಣವಾಗಿದೆ.

11ನೇ ಪೀಠಾಧಿಪತಿಯಾಗಿದ್ದ ಲಿಂ.ಸಿದ್ಧಲಿಂಗ ಸ್ವಾಮೀಜಿ ಸಮಾಜಮುಖಿ ಕೆಲಸಗಳ ಮೂಲಕ ಮಠದ ಕೀರ್ತಿ ವಿಸ್ತಾರಗೊಳಿಸಿದ್ದರು. ಈಗಿನ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಮಠದ ಪರಂಪರೆ ಮುಂದುವರಿದಿದೆ.

ಗುರುಬಸವಲಿಂಗ ಸ್ವಾಮೀಜಿ
ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ
ಈ ಜಾತ್ರೆಯಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಅನುಭಾವ ಹಂಚಿಕೊಳ್ಳಲಿದ್ದಾರೆ. ಜಂಗೀ ಕುಸ್ತಿಗಳು ಭಕ್ತರಿಂದ ಮಹಾಪ್ರಸಾದ ಸೇವೆ ಇದೆ
ಗುರುಬಸವಲಿಂಗ ಸ್ವಾಮೀಜಿ ಪೀಠಾಧಿಪತಿ ದುರದುಂಡೀಶ್ವರ ಮಠ ಅರಭಾವಿ
ಆಕರ್ಷಕ ಮಂಟಪ
ಮೂಲ ದುರದುಂಡೀಶ್ವರ ಸಮಾಧಿಸ್ಥರಾದ ಗದ್ದುಗೆಯು ಅರಭಾವಿಯ ನಸುಹಳದಿಯ ಕೆಂಪು ಶಿಲೆಯಲ್ಲಿ ನಿರ್ಮಾಣಗೊಂಡಿದ್ದು, ಸುಂದರ ಶಿಲ್ಪಕಲಾ ಮಂದಿರವಾಗಿದೆ. 14 ಅಡಿ ಎತ್ತರದ 32 ಕಂಬಗಳಿದ್ದು, ಮಧ್ಯದಲ್ಲಿ ಆಕರ್ಷಕ ಮಂಟಪವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.