ADVERTISEMENT

Diwali 2024: ನಮ್ಮೂರ ಪಾಂಡೋರು

ಸಂತೋಷ ಈ.ಚಿನಗುಡಿ
Published 31 ಅಕ್ಟೋಬರ್ 2024, 5:32 IST
Last Updated 31 ಅಕ್ಟೋಬರ್ 2024, 5:32 IST
‍‍ಸಗಣಿಯಿಂದ ಮಾಡಿದ ಪಾಂಡವರ ಮೂರ್ತಿಗಳು (ಸಂಗ್ರಹ ಚಿತ್ರ)
‍‍ಸಗಣಿಯಿಂದ ಮಾಡಿದ ಪಾಂಡವರ ಮೂರ್ತಿಗಳು (ಸಂಗ್ರಹ ಚಿತ್ರ)   

‘‍ಪಾಂಡೋರು’ ಎಂಬ ಪದ ಉತ್ತರ ಕರ್ನಾಟಕದಲ್ಲಿ ಜನಜನಿತ. ಪಾಂಡವರು ಎಂಬ ಪದವೇ ಜನಪದರ ಬಾಯಲ್ಲಿ ಪಾಂಡೋರು ಆಗಿ ಮುಂದುವರಿದಿದೆ.

ದೀಪಾವಳಿ ಬೆಳಕಿನ ಹಬ್ಬ ಮಾತ್ರವಲ್ಲ; ಪಾಂಡವರ ಹಬ್ಬವೂ ಹೌದು. ಉತ್ತರ ಕರ್ನಾಟಕದ ವಿಶಿಷ್ಟ ಆಚರಣೆಗಲ್ಲಿ ಇದೂ ಒಂದು. ವನವಾಸಕ್ಕೆ ಹೊರಟ ಪಾಂಡವ ಪರಿವಾರದವರ ಪ್ರತೀಕವಾಗಿ ಇದನ್ನು ಆಚರಿಸುತ್ತ ಬರಲಾಗಿದೆ. ಸಗಣಿಯಲ್ಲಿ ಪಾಂಡವರ ಮೂರ್ತಿಗಳನ್ನು ಮಾಡಿ, ಪ್ರತಿಷ್ಠಾಪಿಸಿ, ಪೂಜಿಸಿ, ತಾರಸಿಯ ಮೇಲೆ ಕೂಡ್ರಿಸುವ ಪದ್ಧತಿ ಈಗಲೂ ಇದೆ. ತಲೆತಲಾಂತರಗಳಿಂದಲೂ ಜನಪದ ಹಬ್ಬವಾಗಿ ಮುಂದುವರಿದು ಬಂದಿದೆ.

ಬಲಿಪಾಡ್ಯದಂದು ಹಸುಗಳ ಸಗಣಿಯನ್ನು ಕೂಡಿಟ್ಟು, ಹದ ಮಾಡಿ ಗೇಣುದ್ದದ ಪುಟಾಣಿ ಮೂರ್ತಿಗಳನ್ನು ಮಾಡುತ್ತಾರೆ. ಅವುಗಳಿಗೆ ಉತ್ತರಾಣಿ ಕಡ್ಡಿ, ಹೊನ್ನಾರಿ ಹೂವು, ಅಣ್ಣಿ ಹೂವುಗಳು, ಚೆಂಡು ಹೂಗಳನ್ನು ಬಳಸಿ ಕಿರೀಟದಂತೆ ಮಾಡುತ್ತಾರೆ.

ADVERTISEMENT

ಧರ್ಮರಾಜ, ಭೀಮ, ಅರ್ಜುನ, ನಕುಲ ಹಾಗೂ ಸಹದೇವ ಎಂಬ ಐದು ಮೂರ್ತಿಗಳನ್ನು ಮನೆಯೊಳಗೆ ಪ್ರತಿಷ್ಠಾಪಿಸುತ್ತಾರೆ. ಧರ್ಮರಾಜನಿಗೆ ‘ಹಿರಿ‍ ಪಾಂಡೋರು’ ಎಂದು ಹೆಸರಿಟ್ಟು ಮಧ್ಯದಲ್ಲಿ ಕೂಡ್ರಿಸುತ್ತಾರೆ. ಅವನ ಆಚೀಚೆ ‘ಕಿರಿ ಪಾಂಡೋರು’ ಇರುತ್ತಾರೆ. ಎರಡು ಮೂರ್ತಿಗಳನ್ನು ಮನೆಯ ಮುಂಭಾಗದಲ್ಲಿ ಇಡುತ್ತಾರೆ; ಇವುಗಳಿಗೆ ದ್ವಾರಪಾಲಕರು ಎಂಬ ಹೆಸರಿದೆ. ಮತ್ತೆರಡು ಮೂರ್ತಿಗಳನ್ನು ಮನೆಯ ಹಿಂಬಾಗಿಲ ಹೊಸ್ತಿಲ ಬಳಿ ಇಟ್ಟು ಕಾವಲುಗಾರರಾಗಿ ಮಾಡುತ್ತಾರೆ.

ಈ ರೀತಿ ಪಾಂಡವರ ಮೂರ್ತಿ ಮಾಡುವಲ್ಲಿಯೂ ಒಂದು ವಿಶಿಷ್ಟ ಆಚರಣೆ ಹಲವು ಕಡೆ ಇದೆ. ಹಿರಿ ಪಾಂಡವನನ್ನು ಮನೆಯ ಹಿರಿಯರೇ ಮಾಡುತ್ತಾರೆ. ಕಿರಿ ಪಾಂಡವರನ್ನು ಮಕ್ಕಳು, ಸೊಸೆಯರು ಮಾಡುವುದು ರೂಢಿ.

ಮೂರ್ತಿಗಳು ಸಿದ್ಧವಾದ ಮೇಲೆ ಅವರ ಮುಂದೆ ಹಸು, ಕೋಣ, ಬೀಸುಗಲ್ಲು, ಒಳಕಲ್ಲು, ಒನಕೆ, ಪಾತ್ರೆಗಳನ್ನು ಸಗಣಿಯಿಂದಲೇ ಮಾಡುತ್ತಾರೆ. ಇವೆಲ್ಲ ಪಾಂಡವರು ವನವಾಸಕ್ಕೆ ಹೊರಟಾಗ ತೆಗೆದುಕೊಂಡು ಹೋದ ವಸ್ತುಗಳು ಎಂಬುದು ನಂಬಿಕೆ. ಮೂರ್ತಿಗಳಿಗೆ ವಿಭೂತಿ, ಕುಂಕುಮ ಹಚ್ಚಿ, ಚೆಂಡು ಹೂವುಗಳಿಂದ ಸಿಂಗರಿಸಲಾಗುತ್ತದೆ. ಸುತ್ತಲೂ ಜೋಳದ ದಂಟು ಇಲ್ಲವೇ ಕಬ್ಬಿನ ಜಲ್ಲೆಗಳನ್ನು ಕಟ್ಟಿ ಚಪ್ಪರದ ರೀತಿ ಮಾಡುವುದನ್ನು ನೋಡುವುದೇ ಚೆಂದ.

ಪಾಂಡವರಿಗೆ ಇಷ್ಟವಾದ ಹಬ್ಬದ ಖಾದ್ಯಗಳನ್ನು ಮಾಡಿ ನೈವೇದ್ಯ ಇಡುತ್ತಾರೆ. ಅದರಲ್ಲೂ ವನವಾಸದಲ್ಲಿ ಅವರು ತಿಂದರು ಎನ್ನಲಾದ ಜೋಳದ ಕಡುಬು ವಿಶೇಷ ಖಾದ್ಯ. ಸಿಹಿಗಡಬು, ಕರ್ಚಿಕಾಯಿ, ಹೋಳಿಗೆ ಮುಂತಾದ ಸಿಹಿ ಅಡುಗೆ ಮಾಡಿ ಅರ್ಪಿಸುತ್ತಾರೆ.

ಸಂಜೆಯಾದ ಬಳಿಕ ಈ ಮೂರ್ತಿಗಳನ್ನು ಮನೆಯ ಮುಂಭಾಗದ ಚಾವಣಿ ಮೇಲೆ ಸಾಲಾಗಿ ಜೋಡಿಸಿ ಇಡುವುದು ರೂಢಿ. ಅವುಗಳ ಮುಂದೆ ಸಗಣಿಯ ಬಟ್ಟಲುಗಳನ್ನು ಮಾಡಿ ಜೋಳ, ಗೋಧಿ, ಸಾಸಿವೆ, ಕಡಲೆ ಮುಂತಾದ ಬೀಜದ ಕಾಳುಗಳನ್ನು ಹಾಕಿ ಇಡುತ್ತಾರೆ. ಅವು ಮೊಳಕೆಯೊಡೆದು ಮಳೆ– ಬೆಳೆ ಹುಲುಸಾಗಿ ಬರಲಿ ಎಂದು ಪ್ರಾರ್ಥಿಸುತ್ತಾರೆ.

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಒಂದು ದಿನ ಮಾತ್ರ ಆಚರಿಸಿದರೆ ಮತ್ತೆ ಕೆಲವೆಡೆ ಮೂರು ದಿನ, ಐದು ದನ, ಏಳು ದಿನಗಳವರೆಗೂ ಈ ಪಾಂಡವರ ಪ್ರತಿಷ್ಠಾಪನೆ ಮಾಡುವ ಪದ್ಧತಿ ಇದೆ.

‍‍ಸಗಣಿಯಿಂದ ಮಾಡಿದ ಪಾಂಡವರ ಮೂರ್ತಿಗಳು (ಸಂಗ್ರಹ ಚಿತ್ರ)
‍‍ಸಗಣಿಯಿಂದ ಮಾಡಿದ ಪಾಂಡವರ ಮೂರ್ತಿಗಳು (ಸಂಗ್ರಹ ಚಿತ್ರ)
‍‍ಸಗಣಿಯಿಂದ ಮಾಡಿದ ಪಾಂಡವರ ಮೂರ್ತಿಗಳು (ಸಂಗ್ರಹ ಚಿತ್ರ)

ಪುಟಾಣಿ ಪಾಂಡವರ ಹೆಜ್ಜೆ ಗುರುತು

ಪಾಂಡವರು ಕಾಡಿಗೆ ಹೋದ ಕ್ಷಣದ ನೆನಪಿಗಾಗಿ ಅವರ ಹೆಜ್ಜೆ ಗುರುತುಗಳನ್ನು ಮುಂಬಾಗಿಲಿನಿಂದ ಹಿತ್ತಲವರೆಗೂ ಮನೆಯ ಕೋಣೆಕೋಣೆಗೂ ಸಾಲಾಗಿ ಮೂಡಿಸುವುದು ಇನ್ನೂ ವಿಶಿಷ್ಟ. ಹೆಣ್ಣುಮಕ್ಕಳು ಪಾತ್ರೆಯಲ್ಲಿ ಸುಣ್ಣ ಕಲಸಿ ಅದರಲ್ಲಿ ಬೊಗಸೆಗಳನ್ನು ಅದ್ದಿ ನೆಲದ ಮೇಲೆ ಸಾಲಾಗಿ ಮೂಡಿಸುತ್ತ ಹೋಗುತ್ತಾರೆ. ಇವು ಪಾಂಡವರ ಹೆಜ್ಜೆ ಗುರುತುಗಳು ಎಂಬ ಕಲ್ಪನೆಯನ್ನು ವಂಶಪಾರಂಪರ್ಯವಾಗಿ ದಾಟಿಸುತ್ತ ಬರಲಾಗಿದೆ. ಪುಟಾಣಿ ಮಕ್ಕಳು ಈ ಹೆಜ್ಜೆಗಳ ಮೇಲೆಯೇ ಹೆಜ್ಜೆ ಇಟ್ಟು ನಡೆಯುತ್ತ ನಲಿಯುವ ಕ್ಷಣಗಳು ಹಳ್ಳಿಯಲ್ಲಿ ಈಗಲೂ ಕಾಣಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.