
ಗೋಕಾಕ: ‘ತಾನೇ ನೇಮಕ ಮಾಡಿದ್ದ ಆಯೋಗಗಳ ವರದಿ ಮತ್ತು ಜಿಲ್ಲಾ ಕೇಂದ್ರವನ್ನಾಗಿಸಲು ಬೇಕಾದ ಅವಶ್ಯಕತೆಗಳು, ಸಂಪನ್ಮೂಲಗಳನ್ನು ಪರಿಗಣಿಸಿ ವೈಜ್ಞಾನಿಕ ಡಿ. 31ರ ಒಳಗಾಗಿ ಕೇಂದ್ರ ಸರ್ಕಾರದ ಸುತ್ತೋಲೆಗಳಿಗೆ ಪೂರಕವಾಗಿ ಹೊಸ ಜಿಲ್ಲೆಗಳ ರಚನೆ ಮಾಡಿ ಅಧಿಸೂಚನೆ ಹೊರಡಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘15 ತಾಲ್ಲೂಕುಗಳು ಹಾಗೂ 18 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ, ರಾಜ್ಯದಲ್ಲಿಯೇ ಅತೀ ದೊಡ್ಡ ಬೆಳಗಾವಿ ಜಿಲ್ಲೆಯ ವಿಭಜನೆ ಪ್ರಕ್ರಿಯೆ ಕ್ಲಿಷ್ಟಕರವಾಗಿದ್ದರೂ ಸರ್ಕಾರ ಇದನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಕೈಗೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
‘ಹೊಸ ಜಿಲ್ಲೆ ರಚನೆ ಕೋರಿಕೆಯು ಆಡಳಿತಾತ್ಮಕ ಅನುಕೂಲದ ದೃಷ್ಟಿಯಿಂದ ಮಾತ್ರ ಇರಬೇಕು. ಜಿಲ್ಲಾ ವಿಭಜನೆ ಪ್ರಕ್ರಿಯೆ ರಾಜಕೀಯ ಹಿತಾಸಕ್ತಿಯ ಅಸ್ತ್ರವಾಗಬಾರದು’ ಎಂದು ಆಗ್ರಹಿಸಿದ್ದಾರೆ.
‘ಗೋಕಾಕ ಜಿಲ್ಲಾ ರಚನೆಯ ಹೋರಾಟ 40-50 ವರ್ಷಗಳ ಸುದೀರ್ಘ ಹೋರಾಟವಾಗಿದೆ. ಸರ್ಕಾರ ಈ ಕುರಿತು ತನ್ನ ರಾಜಕೀಯ ಇಚ್ಚಾಶಕ್ತಿಯನ್ನು ಪ್ರದರ್ಶಿಸಿ ಜಿಲ್ಲಾ ವಿಭಜನೆ ಮತ್ತು ಹೊಸ ಜಿಲ್ಲೆಗಳ ರಚನೆಯ ಅಂತಿಮ ಆದೇಶ ಕೈಗೊಳ್ಳದಿದ್ದರೆ ಪ್ರತಿ ತಾಲ್ಲೂಕಿನಿಂದಲೂ ಹಕ್ಕೊತ್ತಾಯ ಕೇಳಿ ಬರಬಹುದು. ಆಗ ಇದು ಮತ್ತಷ್ಟು ಜಟಿಲವಾಗಬಹುದು’ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.