
ಬೆಳಗಾವಿ: ‘ತಾಂತ್ರಿಕ ಕ್ಷೇತ್ರದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾತ್ರವಲ್ಲದೆ; ಸಾಂಸ್ಕೃತಿಕವಾಗಿಯೂ ಮುಂಚೂಣಿಗೆ ಬರಬೇಕು’ ಎಂದು ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ ಹೇಳಿದರು.
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ಎರಡು ದಿನ ಹಮ್ಮಿಕೊಂಡಿರುವ ‘ಯುಕ್ತಿ–2026’ ಸಾಂಸ್ಕೃತಿಕ ಮತ್ತು ತಾಂತ್ರಿಕ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಇದು ದೇಶದಲ್ಲೇ ದೊಡ್ಡ ವಿ.ವಿಯಾಗಿದೆ. ಇಲ್ಲಿ ಕಲಿಕೆಗೆ ಪೂರಕ ವಾತಾವರಣ ಇದೆ. ಇದರ ಸದ್ಬಳಕೆ ಮಾಡಿಕೊಂಡು ವೃತ್ತಿಬದುಕು ಕಟ್ಟಿಕೊಳ್ಳಿ’ ಎಂದು ಸಲಹೆ ಕೊಟ್ಟರು.
ನಟ ಪ್ರಮೋದ ಶೆಟ್ಟಿ, ‘ಕಾಲೇಜು ದಿನಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದೆ. ಸಿಕ್ಕ ಅವಕಾಶ ಬಳಸಿಕೊಂಡು ನನ್ನ ಪ್ರತಿಭೆ ಪ್ರದರ್ಶಿಸುತ್ತಿದ್ದೆ. ಇದೇ ನನ್ನನ್ನು ನಟನಾಗಿ ರೂಪಿಸಿತು’ ಎಂದರು.
‘ಕನ್ನಡ ಚಿತ್ರರಂಗದಲ್ಲಿ ಇರುವ ಬಹುತೇಕ ನಿರ್ದೇಶಕರು ಎಂಜಿನಿಯರಿಂಗ್ ಪದವೀಧರರೇ. ಕೆಲವು ವಿದ್ಯಾರ್ಥಿಗಳು ಪಾಲಕರ ಒತ್ತಡಕ್ಕೆ ಮಣಿದು ಎಂಜಿನಿಯರಿಂಗ್ ಕೋರ್ಸ್ ಸೇರುತ್ತಾರೆ. ಕಲಿಕೆ ನಂತರ ತಮಗೆ ಆಸಕ್ತಿ ಇರುವ ಕ್ಷೇತ್ರ ಆಯ್ದುಕೊಂಡು ಅದರಲ್ಲಿ ಸಾಧನೆ ಮಾಡುತ್ತಾರೆ. ಕ್ಷೇತ್ರ ಯಾವುದೇ ಇರಲಿ. ಒಂದು ನಿರ್ದಿಷ್ಟ ಗುರಿ. ಮತ್ತೊಂದು ಸತತ ಪರಿಶ್ರಮ ಮುಖ್ಯ’ ಎಂದು ಹೇಳಿದರು.
ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಟಿಯರಾದ ಸೋನಾಲ್ ಮೊಂಥೆರೊ, ಸಪ್ತಮಿ ಗೌಡ, ನಟ ತರುಣ ಸುಧೀರ, ಕುಲಸಚಿವ ಪ್ರೊ.ಪ್ರಸಾದ ರಾಂಪೂರೆ, ಮೌಲ್ಯಮಾಪನ ಕುಲಸಚಿವ ಪ್ರೊ.ಉಜ್ವಲ್ ಯು.ಜೆ., ಹಣಕಾಸು ಅಧಿಕಾರಿ ಪ್ರಶಾಂತ್ ನಾಯಕ ಜಿ., ಕಾರ್ಯನಿರ್ವಾಹಕ ಸಮಿತಿ ಸದಸ್ಯ ಎಸ್.ಬಿ.ಸಂಗಪ್ಪ, ವಿಶೇಷಾಧಿಕಾರಿಗಳಾದ ಕೆ.ಎಂ.ಕುಮಾರಿ ಚೈತ್ರಾ, ರೋಹನ್ ಗೌರವ ಇತರರಿದ್ದರು.
‘ಯುಕ್ತಿ’ ಮೇಳದ ಮೊದಲ ದಿನವಾದ ದಿನವಾದ ಶುಕ್ರವಾರ ಸಾವಿರಾರು ವಿದ್ಯಾರ್ಥಿಗಳು ನಾನಾ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ, ಸಭಿಕರ ಗಮನಸೆಳೆದರು.
ಒಂದೆಡೆ ನೃತ್ಯ ಪ್ರೇಕ್ಷಕರನ್ನು ಬೆರಗುಗೊಳಿಸಿತು. ಮತ್ತೊಂದೆಡೆ ಫ್ಯಾಷನ್ ಷೋನಲ್ಲಿ ಕೆಲವು ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಉಡುಗೆ ತೊಟ್ಟು ಸಂಭ್ರಮಿಸಿದರೆ, ಇನ್ನೂ ಕೆಲವು ವಿದ್ಯಾರ್ಥಿಗಳು ಸಾಂಪ್ರದಾಯಿಕ ದಿರಿಸಿನಲ್ಲಿ ಬಂದು ‘ಕುರುಕ್ಷೇತ್ರ’ದಲ್ಲಿ ಬರುವ ಪಾತ್ರಗಳನ್ನು ನಿರೂಪಿಸಿ ಗತಕಾಲದ ವೈಭವ ಪರಿಚಯಿಸಿದರು.
ಇದಲ್ಲದೆ, ವಿವಿಧ ಸ್ಪರ್ಧೆಗಳು ನಡೆದವು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಜತೆಗೆ, ಸಾಂಸ್ಕೃತಿಕ ಚಟುವಟಿಕೆಗಳ ಪರಿಚಯವೂ ಇರಲೆಂದು ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮ ಮಾಡುತ್ತಿದ್ದೇವೆಪ್ರೊ.ಎಸ್.ವಿದ್ಯಾಶಂಕರ, ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.