ADVERTISEMENT

ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಅಮಾನತು

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 15:14 IST
Last Updated 17 ಜೂನ್ 2021, 15:14 IST
ಅಮಾನತ್ತಾದ ಅಥಣಿ ಮ.ಉ.ಯೋ ಸಹಾಯಕ ನಿರ್ದೇಶಕ ರಿಯಾಜ ಮುಲ್ತಾನಿ
ಅಮಾನತ್ತಾದ ಅಥಣಿ ಮ.ಉ.ಯೋ ಸಹಾಯಕ ನಿರ್ದೇಶಕ ರಿಯಾಜ ಮುಲ್ತಾನಿ   

ಅಥಣಿ (ಬೆಳಗಾವಿ ಜಿಲ್ಲೆ): ಮಧ್ಯಾಹ್ನ ಬಿಸಿಯೂಟ ಯೋಜನೆಯ ತೊಗರಿಬೇಳೆಯನ್ನು ನಿಗದಿತ ನಾಲ್ಕು ಶಾಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆ ಮಾಡಿ ಕರ್ತವ್ಯ ಲೋಪ ಎಸಗಿದ ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ರಿಯಾಜ ಮಹಮದ ಮುಲ್ತಾನಿ ಅವರನ್ನು ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ.ದರ್ಶನ್‌ ಅಮಾನತು ಮಾಡಿದ್ದಾರೆ.

ಅಧಿಕೃತವಾಗಿ ಅಗತ್ಯವಿರುವ ಹಾಗೂ ಬೇಡಿಕೆ ಸಲ್ಲಿಸಿದ ಶಾಲೆಗಳಿಗೆ ಪೂರೈಸುವ ಬದಲಿಗೆ ಬೇಡಿಕೆಯೇ ಇಲ್ಲದ ಶಾಲೆಗಳಿಗೆ 38.32 ಕ್ವಿಂಟಲ್ ತೊಗರಿಬೇಳೆಯನ್ನು ನಿಯಮಬಾಹಿರವಾಗಿ ವಿತರಿಸಿದ್ದು ವರದಿಯಿಂದ ತಿಳಿದುಬಂದಿದೆ. ಅರ್ಹ ಶಾಲೆಯ ಮಕ್ಕಳು ಸರ್ಕಾರಿ ಸೌಲಭ್ಯದಿಂದ ವಂಚಿತರಾಗಲು ಕಾರಣೀಭೂತರಾಗಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ, ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

‘ರಿಯಾಜ ಅವರು, ನಿಯಮ ಉಲ್ಲಂಘಿಸಿ ಖಾಸಗಿ ವಾಹನಗಳಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಹಂಚಿಕೆ ಮಾಡಿದ್ದರು. ಕೋಹಳ್ಳಿ ಸರ್ಕಾರಿ ಪ್ರೌಢಶಾಲೆಗೆ 10 ಕ್ವಿಂ., ಅಥಣಿ ಅಬ್ದುಲ್ ಕಲಾಂ ಅನುದಾನಿತ ಪ್ರೌಢಶಾಲೆಗೆ 10 ಕ್ವಿಂ., ದರೂರದ ಶ್ರೀಕೃಷ್ಣ ಶಿಕ್ಷಣ ಸಮಿತಿ ಕನ್ನಡ ಮಾಧ್ಯಮ ಹಿ.ಪ್ರಾ. ಶಾಲೆಗೆ 11. 29 ಕ್ವಿಂ. ಮತ್ತು ಕಾಗವಾಡದ ಮಲ್ಲಿಕಾರ್ಜುನ ವಿದ್ಯಾಲಯಕ್ಕೆ 8.03 ಕ್ವಿಂ. ವಿತರಿಸಿದ್ದ ಬಗ್ಗೆ ಸಲ್ಲಿಕೆಯಾಗಿದ್ದ ದೂರಿನ ಮೇರೆಗೆ ಕ್ರಮ ವಹಿಸಲಾಗಿದೆ’ ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.