ಅಥಣಿ: ‘ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಸಿಲು ಪಟ್ಟಣದ ವರ್ತಕರು ಇನ್ನೂ ಒಂದು ವಾರದವರೆಗೆ ಸ್ವಯಂ ಲಾಕ್ಡೌನ್ ಮುಂದುವರಿಸಬೇಕು’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೋರಿದರು.
ಇಲ್ಲಿನ ಶಿವಣಗಿ ಸಂಸ್ಕೃತಿ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಜುಲೈ 13ರಂದು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗುವುದು. ಸೋಂಕು ಹರಡದಂತೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಲಾಗುವುದು’ ಎಂದರು.
‘ಖಾಸಗಿ ವೈದ್ಯರು ಆಸ್ಪತ್ರೆಗಳನ್ನು ಬಂದ್ ಮಾಡಬೇಡಿ. ಬೇಕಿರುವ ಪಿಪಿಇ ಕಿಟ್ ಅಥವಾ ಇನ್ನಿತರ ವ್ಯವಸ್ಥೆಯನ್ನು ನನ್ನ ದುಡ್ಡಿನಿಂದ ಕೊಡಿಸಿಕೊಡುತ್ತೇನೆ. ಆದರೆ, ಆಸ್ಪತ್ರೆಗಳನ್ನು ತೆರೆದು ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.
‘ಕೊರೊನಾ ಬಂದರೆ ಗುಣಮುಖರಾಗಲು ಸಾಧ್ಯವಿದೆ. ಯಾರೂ ಹೆದರಬಾರದು. ಸೋಂಕು ಸಮುದಾಯಕ್ಕೆ ಹಬ್ಬಿದೆ. ಇದಕ್ಕೆ ಇನ್ನೂ ಔಷಧಿ ಸಿಕ್ಕಿಲ್ಲ. ಜೀವ ಮತ್ತು ಜೀವನ ಎರಡನ್ನೂ ರಕ್ಷಿಸಿಕೊಂಡು ಜೊತೆಯಾಗಿ ಸಾಗಬೇಕಾಗಿದೆ. ಇದಕ್ಕಾಗಿ ಅಂತರ ಕಾಯ್ದುಕೊಳ್ಳಬೇಕು. ಮುಖಗವಸು ಧರಿಸಬೇಕು’ ಎಂದರು.
ಕೋವಿಡ್–19 ಪರೀಕ್ಷೆ ಬುಧವಾರದಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುರುವಾಗಲಿದೆ ಎಂದು ತಿಳಿಸಿದರು.
ಲಾಕ್ಡೌನ್ ಮುಂದುವರಿಕೆಗೆ ವ್ಯಾಪಾರಿಗಳು ಸಮ್ಮತಿ ಸೂಚಿಸಿದರು.
ಮುಖಂಡರಾದ ಗಜಾನನ ಮಂಗಸೂಳಿ, ಡಾ.ಮಲ್ಲಿಕಾರ್ಜುನ ಹಂಜಿ, ಉಮೇಶ ಬೋಟಂಡಕರ, ರಾಮಗೌಡ ಪಾಟೀಲ(ಶಿವನೂರ), ಮುರುಘೇಶ ಕುಮಠಳ್ಳಿ, ಶಿವಾನಂದ ದಿವಾನಮಳ, ಶಿವಕುಮಾರ ಸವದಿ, ಶಿನಾಂದ ಬುರ್ಲಿ, ತಹಶೀಲ್ದಾರ್ ದುಂಡಪ್ಪ ಕೋಮಾರ, ತಾ.ಪಂ. ಇಒ ರವೀಂದ್ರ, ಡಿವೈಎಸ್ಪಿ ಎಸ್.ವಿ. ಗಿರೀಶ, ಸಿಪಿಐ ಶಂಕರಗೌಡ ಬಸವನಗೌಡರ, ಟಿಎಚ್ಒ ಮುತ್ತಾಣ್ಣ ಕೊಪ್ಪದ್ದ, ಡಾ.ಸಿ.ಎಸ್. ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.