ADVERTISEMENT

ಯಡಿಯೂರಪ್ಪರನ್ನು ಹಿನ್ನೆಲೆಗೆ ತಳ್ಳಿದ್ದು ಬಿಜೆಪಿ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 15:31 IST
Last Updated 7 ಜೂನ್ 2022, 15:31 IST
   

ಬೆಳಗಾವಿ: ‘ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ. ಆದರೆ, ಆರ್‌ಎಸ್‌ಎಸ್‌ ಹಾಗೂ ಕೆಲವು ಮುಖಂಡರು ಈಗ ಅವರನ್ನೇ ಹಿನ್ನೆಲೆಗೆ ತಳ್ಳಿದ್ದಾರೆ. ಆ ಪಕ್ಷದ ಮುಖಂಡರು ತಮ್ಮ ಮನೆಯಲ್ಲೇ ಇಷ್ಟು ದೊಡ್ಡ ಬಿರುಕು ಇಟ್ಟುಕೊಂಡು, ಕಾಂಗ್ರೆಸ್‌ ಟೀಕಿಸುವುದು ಹಾಸ್ಯಾಸ್ಪದ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

‘ಕಾಂಗ್ರೆಸ್‌ನಲ್ಲಿ ಗೊಂದಲವಿದೆ, ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರ ನಡುವೆ ವಿರಸವಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಆದರೆ, ಅವರ ಪಕ್ಷವು ದೊಡ್ಡ ಸಮುದಾಯದ ಹಿರಿಯ ನಾಯಕರನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ಜನರಿಗೆ ತಿಳಿಸಲಿ’ ಎಂದು ಅವರು ನಗರದಲ್ಲಿ ಮಂಗಳವಾರ ಮಾಧ್ಯಮದವರ ಮುಂದೆ ಹೇಳಿದರು.

‘ಚುನಾವಣೆ ಸಂದರ್ಭದಲ್ಲಿ ಗೊಂದಲ ಸೃಷ್ಟಿಸಿ ಜನರ ಭಾವನೆಗಳ ಜತೆ ಚಲ್ಲಾಟವಾಡಿ, ಮತ ಗಿಟ್ಟಿಸಿಕೊಳ್ಳುವುದು ಬಿಜೆಪಿಯವರಿಗೆ ರೂಢಿಯಾಗಿದೆ. ಆದರೆ, ಕಾಂಗ್ರೆಸ್‌ ಜೀವನ ಕಟ್ಟಿಕೊಡುವ ಪಕ್ಷ. ನಿಮ್ಮಂತೆ ಚಲ್ಲಾಟವಾಡುವುದಿಲ್ಲ. ಇದನ್ನು ಮನಗಂಡು ಮತದಾರರು ಪರಿಷತ್ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸುತ್ತಾರೆ’ ಎಂದರು.

ADVERTISEMENT

‘ರಾಜಕಾರಣದಲ್ಲಿ ಹಿರೋ ಆದವನು ಜಿರೋ ಆಗುತ್ತಾನೆ. ಜೀರೋ ಆದವನು ಹೀರೋ ಆಗುತ್ತಾನೆ. ಆದರೆ ಯಾವತ್ತೂ ಜನಸಾಮಾನ್ಯರು ಯಾವತ್ತೂ ಹಿರೋ ಅಗಿಯೇ ಇರುತ್ತಾರೆ. ಬಿಜೆಪಿಯಲ್ಲಿ ಅಸಂಬದ್ಧವಾಗಿ ಮಾತನಾಡುವವರೇ ಹೀರೋ. ಆದರೆ, ಕಾಂಗ್ರೆಸ್‌ಗೆ ಮತದಾರರೇ ಹೀರೊ’ ಎಂದೂ ಹೇಳಿದರು.

‘ಸದ್ಯ ಕಾಂಗ್ರೆಸ್‌ ಕಷ್ಟದಲ್ಲಿದೆ. ಆದರೆ, ನಿಯತ್ತಿನ ಪಕ್ಷ ಯಾವುದು ಎಂದು ಮತದಾರರಿಗೆ ಗೊತ್ತಿದೆ. ಕತ್ತಲು ಕಳೆದ ಮೇಲೆ ಬೆಳಕು ಬರುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಪುಟಿದೇಳಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.