
ಬೈಲಹೊಂಗಲ: ಬೈಲಹೊಂಗಲ ಬಳಿಯ ಆನಿಗೋಳದಲ್ಲಿ ಮೈಕ್ರೊ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಗೌರವ್ವ ನೀಲಪ್ಪ ಕೆಂಗಾನೂರ (42) ಅವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಅವರು ಕೆರೆಗೆ ಹಾರಿದ್ದು, ಬುಧವಾರ ಶವ ಪತ್ತೆಯಾಗಿದೆ. ಸಾಯುವ ಮುನ್ನ ಅವರು ಮನೆಯ ಗೋಡೆಯ ಮೇಲೆ ‘ಡೆತ್ನೋಟ್’ ಬರೆದಿದ್ದಾರೆ.
‘ಜೀವನ ನಿರ್ವಹಣೆಗಾಗಿ ಗೌರವ್ವ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಬೈಲಹೊಂಗಲದ ಉಜ್ಕೀವನ ಸ್ಮಾಲ್ ಫೈನಾನ್ಸ್, ಭಾರತ ಸ್ವಮುಕ್ತಿ ಸಂಘ ಎಂಬ ಫೈನಾನ್ಸ್ಗಳಿಂದ ₹5 ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸುವಂತೆ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಅವರ ಪತಿ ನೀಲಪ್ಪ ಎಫ್ಐಆರ್ ದಾಖಲಿಸಿದ್ದಾರೆ.
‘ನನ್ನ ಸಾವಿಗೆ ಸಾಲ ಕಾರಣ. ಆರೂಢ ತಂಗಿಯನ್ನು ಚೆನ್ನಾಗಿ ನೋಡಿಕೊ. ಸುಮಿತ್ರ, ಮಂಜವ್ವ, ಕಸ್ತೂರಿ ಮಕ್ಕಳು ನಿಮ್ಮ ಜವಾಬ್ದಾರಿ. ಸಿದ್ಧಪ್ಪ ಆರೂಢನನ್ನು 10ನೇ ತರಗತಿ ಪಾಸ್ ಮಾಡಿಸು. ಇದು ನನ್ನ ಕೊನೆಯ ಆಸೆ’ ಎಂದು ಅವರು ಅಡುಗೆ ಮನೆಯ ಗೋಡೆ ಮೇಲೆ ವಿಭೂತಿ ತುಣುಕಿನಿಂದ ಬರೆದಿದ್ದು ಪತ್ತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.