ಬೆಳಗಾವಿ: ‘ಸಮಾಜದಲ್ಲಿ ಉತ್ತಮ ಸಂಸ್ಕಾರ ಬೆಳೆಯಲೆಂದು ಧರ್ಮ ಪ್ರಚಾರ ಮಾಡಬೇಕು. ಸನ್ಯಾಸಿಗಳೊಂದಿಗೆ ಜನಸಾಮಾನ್ಯರೂ ಈ ಕಾರ್ಯದಲ್ಲಿ ತೊಡಗಬೇಕು. ಆಗ, ಸಾಮಾಜಿಕ ಅನಾಹುತಗಳ ವಿರುದ್ಧ ಜಾಗೃತಿ ಮೂಡುತ್ತದೆ’ ಎಂದು ಇಲ್ಲಿನ ವಿಶ್ವಗುರು ಬಸವ ಮಂಟಪ ಸಂಚಾಲಕ ಪ್ರಭುಲಿಂಗ ಸ್ವಾಮೀಜಿ ಹೇಳಿದರು.
ವಿಶ್ವಗುರು ಬಸವ ಜ್ಯೋತಿ ಯಾತ್ರಾ ಸಮಿತಿ, ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಘಟಕ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಚನ ಚಿಂತನಾ ವೇದಿಕೆಗಳ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವಗುರು ಬಸವ ಜ್ಯೋತಿ ಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಪವಿತ್ರ ಶ್ರಾವಣ ಮಾಸಾಚರಣೆ ಭಾಗವಾಗಿ ನಡೆಯುತ್ತಿರುವ ಬಸವ ಜ್ಯೋತಿ ಕಾರ್ಯಕ್ರಮಗಳು ಮನೆ–ಮನಗಳಲ್ಲಿ ಉತ್ತಮ ಮೌಲ್ಯಗಳನ್ನು ಪ್ರತಿಸ್ಥಾಪಿಸಿ ಬೆಳೆಸಲು ಸಹಕಾರಿಯಾಗಲಿವೆ’ ಎಂದರು.
ಶರಣ ಗುರಪ್ಪ ಮಾಳಗಿ ‘ಬಸವ ಜ್ಯೋತಿ ಕಿರು ಹೊತ್ತಿಗೆ’ ಬಿಡುಗಡೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಶರಣ ಸಂಗಪ್ಪ ಪಲ್ಲೇದ ಬಸವ ಧ್ವಜಾರೋಹಣ ನೆರವೇರಿಸಿದರು. ಕ್ರಾಂತಿ ಗೊಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸದಸ್ಯರು ಬಸವ ಪೂಜೆ ನೆರವೇರಿಸಿದರು. ಲಿಂಗಾಯತ ಧರ್ಮ ಮಹಾಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಮಾರಯ್ಯ ಗಡಗಲಿ ಸ್ವಾಗತಿಸಿದರು. ರಾಷ್ಟ್ರೀಯ ಬಸವದಳದ ಅಧ್ಯಕ್ಷ ಕೆ. ಬಸವರಾಜ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.