ADVERTISEMENT

ಭೂಮಿ ಇರುವವರೆಗೂ ಬಸವ ತತ್ವ ಬೇಕು: ಸಚಿವ ಸತೀಶ ಜಾರಕಿಹೊಳಿ

‘ಬಸವ ಸಂಸ್ಕೃತಿ ಅಭಿಯಾನ’ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆಶಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 2:23 IST
Last Updated 12 ಸೆಪ್ಟೆಂಬರ್ 2025, 2:23 IST
ಬೆಳಗಾವಿಯಲ್ಲಿ ಗುರುವಾರ ನಡೆದ ‘ಬಸವ ಸಂಸ್ಕೃತಿ ಅಭಿಯಾನ’ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ನಾಡಿನ ವಿವಿಧ ಮಠಾಧೀಶರು, ಶರಣೆಯರೂ ಪಾಲ್ಗೊಂಡರು  ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಗುರುವಾರ ನಡೆದ ‘ಬಸವ ಸಂಸ್ಕೃತಿ ಅಭಿಯಾನ’ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ನಾಡಿನ ವಿವಿಧ ಮಠಾಧೀಶರು, ಶರಣೆಯರೂ ಪಾಲ್ಗೊಂಡರು  ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಈ ನೆಲದ ಮೂಲ ತತ್ವಗಳನ್ನು ತಿರುಚುವ ಪ್ರಯತ್ನಗಳು ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಬಂದಿವೆ. ಬಸವಾದಿ ಶರಣರು ಮೂಲ ತತ್ವಗಳ‌ನ್ನು ಮತ್ತೆ ಬೆಳಗಿದರು. ಬಸವ ತತ್ವಗಳು ಭೂಮಿ ಇರುವವರೆಗೂ ಇರಬೇಕಾದುದು ಅನಿವಾರ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಸಂಘಟನೆ ಸಂಯುಕ್ತವಾಗಿ ಇಲ್ಲಿನ ನಾಗನೂರು ರುದ್ರಾಕ್ಷಿ ಮಠದ ಆವರಣದಲ್ಲಿ ಗುರುವಾರ ಏರ್ಪಡಿಸಿದ ‘ಬಸವ ಸಂಸ್ಕೃತಿ ಅಭಿಯಾನ’ದಲ್ಲಿ ಅವರು ಮಾತನಾಡಿದರು.

‘ಬಸವಣ್ಣ ಹಾಗೂ ಕಲ್ಯಾಣದ ಶರಣರು ಸಮಾನತೆಗೆ ಹೋರಾಡಿದರು. ಅವರ ತತ್ವಗಳನ್ನು ಹತ್ತಿಕ್ಕಲು ವ್ಯವಸ್ಥಿತ ಸಂಚು ನಡೆಯಿತು. ಮಹಾಜ್ಞಾನದ ಖನಿಯಾಗಿದ್ದ ವಚನಗಳನ್ನು ನಾಶ ಮಾಡಲಾಯಿತು. ಶರಣರು ಪ್ರಾಣಕ್ಕಿಂತ ಹೆಚ್ಚಾಗಿ ವಚನಗಳನ್ನು ಕಾಪಾಡಲು ಯತ್ನಿಸಿದರು. ಅವರ ತ್ಯಾಗದ ಪರಿಣಾಮ ಇಂದು ಬಸವ ತತ್ವಗಳು ನಮಗೆ ಪ್ರಾಪ್ತವಾಗುತ್ತಿವೆ’ ಎಂದರು.

ADVERTISEMENT

‘ಭಾರತೀಯ ಸಂವಿಧಾನಕ್ಕೂ ವಚನ ತತ್ವಗಳಿಗೂ ಏನೂ ವ್ಯತ್ಯಾಸವಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಶರಣರು ವಚನಗಳಲ್ಲಿ ಹೇಳಿದ್ದನ್ನೇ ಡಾ.ಬಿ.ಆರ್‌.ಅಂಬೇಡ್ಕರ್ ಸಂವಿಧಾನದಲ್ಲಿ ಬರೆದಿದ್ದಾರೆ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದರು. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವುದಕ್ಕೂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದರು’ ಎಂದೂ ಹೇಳಿದರು.

ಚಿಂತನೆ ಮಂಡಿಸಿದ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ‘12ನೇ ಶತಮಾನದಲ್ಲಿ ವೈದಿಕ ಸಂಪ್ರದಾಯವಾದಿಗಳು ವಚನಗಳನ್ನು ನಾಶ ಮಾಡಿದರು. ಆದರೆ, ಇಂದು ನಮ್ಮವರೇ ನಾಶ ಮಾಡುತ್ತಿದ್ದಾರೆ. ಯಾರನ್ನು ದೂರುವುದು ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಲಿಂಗಾಯತ ಧರ್ಮದ ಮರುಸ್ಥಾಪನೆಯೊಂದೇ ಇದಕ್ಕೆ ಇರುವ ಮಾರ್ಗ’ ಎಂದು ಕರೆ ನೀಡಿದರು.

ಹಂದಿಗುಂದದ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ‘ವೀರಶೈವ– ಲಿಂಗಾಯತ ಒಂದೇ ಎಂದು ನೋಡಬೇಡಿ. ಕೆಲವರು ಉದ್ದೇಶಪೂರ್ವಕ ಸಮಾಜವನ್ನು ದಾರಿ ತಪ್ಪಿಸುತ್ತಿದ್ದಾರೆ. ಎಲ್ಲಿಯವರೆಗೆ ವೀರಶೈವ ಎಂಬುದನ್ನು ಲಿಂಗಾಯತರಿಂದ ಸಂಪೂರ್ಣ ಕುತ್ತುಹಾಕುವುದಿಲ್ಲವೋ ಅಲ್ಲಿಯವರೆಗೆ ಪ್ರತ್ಯೇಕ ಧರ್ಮ ಮಾನ್ಯತೆ ಸಿಗಲು ಸಾಧ್ಯವೇ ಇಲ್ಲ’ ಎಂದು ಪ್ರತಿಪಾದಿಸಿದರು.

‘ಲಿಂಗಾಯತ ಧರ್ಮ 12ನೇ ಶತಮಾನದಲ್ಲಿ ಹುಟ್ಟಿದೆ. ಹಿಂದೂ ಧರ್ಮ ಸಾವಿರಾರು ವರ್ಷಗಳ ಹಿಂದೆ ಹುಟ್ಟಿದೆ. ಪುರಾತನ ಧರ್ಮವನ್ನು ಅನುಸರಿಸುವುದೇ ಸರಿ ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಇದು ತಪ್ಪು ಕಲ್ಪನೆ. ಬಸವಾದಿ ಶರಣರು ಹಳೆಯ ಗೋಡೆಯನ್ನು ದುರಸ್ತಿ ಮಾಡಿಲ್ಲ. ಅದನ್ನು ಪೂರ್ಣ ಕೆಡವಿ ಹೊಸ ಮನೆಯನ್ನೇ ಕಟ್ಟಿದ್ದಾರೆ. ಹೊಸದಾದ ವಿಚಾರಗಳನ್ನು ಹೊಸ ತತ್ವಗಳನ್ನು ಹೊಂದಿರುವ ಲಿಂಗಾಯತ ಧರ್ಮವೇ ವಿಶ್ವ ಧರ್ಮವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಅಧ್ಯಾಪಕ ಶಿವಲಿಂಗ ಹೇಡೆ ‘ದಯವೇ ಧರ್ಮದ ಮೂಲ’ ಕುರಿತು ಹಾಗೂ ಚಿಗರಹಳ್ಳಿ ಸಿದ್ಧಬಸವ ಕಬೀರ ಸ್ವಾಮಿಜಿ ‘ಅಂತರಂಗ–ಬಹಿರಂಗ ಶುದ್ಧಿ’ ಕುರಿತು ಉಪನ್ಯಾಸ ನೀಡಿದರು. ನಾಡಿನ ವಿವಿಧ ಮಠಗಳ ಪೀಠಾಧಿಪತಿಗಳು, ಮಾತಾಜಿ ಅವರು, ಧುರೀಣರು ವೇದಿಕೆ ಮೇಲಿದ್ದರು. ನಂತರ ಸಾಣೇಹಳ್ಳಿಯ ಶಿವ ಸಂಚಾರ ತಂಡದಿಂದ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ನಡೆಯಿತು.ದೇಶದ ಶೇ 99ರಷ್ಟು ಮಂದಿ ಅಸ್ಪೃಶ್ಯರೇ ಆಗಿದ್ದಾಗ ದೇವಸ್ಥಾನಕ್ಕೆ ಪ್ರವೇಶವೇ ಇಲ್ಲದಿದ್ದಾಗ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದರು. ಆ ಮೂಲಕ ಇಡೀ ದೇಶ ರಕ್ಷಿಸಿದರು

ಬೆಳಗಾವಿಯಲ್ಲಿ ಗುರುವಾರ ನಡೆದ ‘ಬಸವ ಸಂಸ್ಕೃತಿ ಅಭಿಯಾನ’ದಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಪಾಲ್ಗೊಂಡರು  ಪ್ರಜಾವಾಣಿ ಚಿತ್ರ
ಅಕ್ಟೋಬರ್‌ 5ರಂದು ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ. ಇಡೀ ರಾಜ್ಯ ಸಂಚರಿಸಿದ ಮೇಲೆ ನಾವೆಲ್ಲ ಬೆಂಗಳೂರಿನಲ್ಲಿ ಒಂದಾಗಿ ಶಕ್ತಿ ಪ್ರದರ್ಶಿಸಲು ಸೇರಬೇಕು
ಬಸವಲಿಂಗ ಪಟ್ಡದ್ದೇವರು ಭಾಲ್ಕಿ
ದೇಶದ ಶೇ 99ರಷ್ಟು ಮಂದಿ ಅಸ್ಪೃಶ್ಯರೇ ಆಗಿದ್ದಾಗ ದೇವಸ್ಥಾನಕ್ಕೆ ಪ್ರವೇಶವೇ ಇಲ್ಲದಿದ್ದಾಗ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದರು. ಆ ಮೂಲಕ ಇಡೀ ದೇಶ ರಕ್ಷಿಸಿದರು
ನಿಜಗುಣಾನಂದ ಸ್ವಾಮೀಜಿ ಬೈಲೂರು
ಕೆಲವು ಮಠಾಧೀಶರು ಇನ್ನೂ ಮುಂಚೂಣಿ ಆಂದೋಲನಕ್ಕೆ ಬಂದಿಲ್ಲ. ಹಿಂದೆ ನಿಂತು ಜೈ ಅನ್ನಬೇಡಿ. ಗಟ್ಟಿಯಾಗಿ ಲಿಂಗಾಯತರೆಂದು ಹೇಳಿಕೊಳ್ಳಿ. ಇಲ್ಲದಿದ್ದರೆ ಉಳಿಗಾಲವಿಲ್ಲ
ಶಿವಾನಂದ ಸ್ವಾಮೀಜಿ ಹಂದಿಗುಂದ
ಲಿಂಗಾಯತ ಎನ್ನುವುದು ಪರಿಪೂರ್ಣ ಧರ್ಮ ಸ್ವತಂತ್ರ ಧರ್ಮವಾಗಿದೆ. ಈಗ ಬೇಕಿರುವುದು ಸಾಂವಿಧಾನಿಕ ಮಾನ್ಯತೆ ಮಾತ್ರ. ಅದು ಸಿಗುವವರೆಗೂ ಹೋರಾಟ ನಿಲ್ಲದು
ಗಂಗಾ ಮಾತಾಜಿ ಬಸವ ಧರ್ಮ ಪೀಠ ಕೂಡಲಸಂಗಮ
ಪ್ರಜೆಗಳಿಗೆ ಅಧಿಕಾರವೇ ಇಲ್ಲದ ಪ್ರಭುತ್ವದ ಕಾಲದಲ್ಲಿ ಬಸವಣ್ಣ ಜನ ಸಮಾನತೆ ಸಂದೇಶ ಸಾರಿದರು. ಸಾಮಾಜಿಕ ನ್ಯಾಯ ಬೋಧಿಸಿದರು. ಅನುಷ್ಠಾನವನ್ನೂ ಮಾಡಿದರು
ತೋಂಟದ ಸಿದ್ಧರಾಮ ಸ್ವಾಮೀಜಿ ಗದಗ

‘ಗಣತಿಯಲ್ಲಿ ಲಿಂಗಾಯತ ಎಂದೇ ಬರೆಸಿ’

‘ಮಾತಿನಿಂದ ಶೂರರು ಓದಿನಿಂದ ಶೂರರು ಹಣದಿಂದ ಶೂರರು ನಮ್ಮಲ್ಲಿ ಸಾಕಷ್ಟಿದ್ದಾರೆ. ಆದರೆ ಕೃತಿಶೂರರಾಗಬೇಕಿದೆ. ಮನೆಯಲ್ಲಿ ಮಕ್ಕಳಿಗೆ ವಚನಗಳನ್ನು ಹೇಳಿಕೊಡಿ. ಆಗ ಧರ್ಮ ತಾನಾಗಿಯೇ ಉಳಿಯುತ್ತದೆ. ಹೋರಾಟದ ಅಗತ್ಯವೇ ಬರುವುದಿಲ್ಲ. ಸರ್ಕಾರ ನಡೆಸುವ ಜಾತಿ ಗಣತಿಯಲ್ಲಿ ಲಿಂಗಾಯತ ಧರ್ಮ ಎಂದೇ ಬರೆಸಿ’ ಎಂದು ಸಾನೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ‘ಲಿಂಗ ಕಟ್ಟಿಕೊಂಡು ಓಡಾಡಿದರೆ ಯಾರೂ ಲಿಂಗಾಯತರಾಗುವುದಿಲ್ಲ. ಅನ್ಯರಿಗೆ ನೆರವಾಗುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಲಿಂಗಾಯತವೇ ನಮ್ಮ ಧರ್ವ ಬಸವನೇ ಧರ್ಮಗುರು ಎಂಬುದನ್ನು ಗಟ್ಟಿಯಾಗಿ ನಂಬಿರಿ’ ಎಂದು ಹೇಳಿದರು.

‘ಅ.5ರಂದು ಸಮಾವೇಶಗೊಳ್ಳಿ’

‘ಪ್ರತ್ಯೇಕ ಧರ್ಮದ ಹೋರಾಟ 40 ವರ್ಷಗಳಿಂದ ನಡೆದೇ ಇದೆ. ಈಗ ನಿರ್ಣಾಯಕ ಹಂತ ತಲುಪಿದೆ. ಇದರ ಭಾಗವಾಗಿ ಅ.5ರಂದು ಬೆಂಗಳೂರಿನಲ್ಲಿ ನಡೆಯುವ ಮಹಾ ಸಮಾವೇಶಕ್ಕೆ ಕೋಟಿ ಸಂಖ್ಯೆಯಲ್ಲಿ ಪಾಲ್ಗೊಳ್ಳಿ’ ಎಂದು ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಕರೆ ನೀಡಿದರು. ‘ಈ ಹಿಂದೆ ನಡೆದ ಜನಗಣತಿಯಲ್ಲಿ ಕೇವಲ 18 ಲಕ್ಷ ಮಂದಿ ಮಾತ್ರ ಲಿಂಗಾಯತ ಧರ್ಮ ಎಂದು ಬರೆದುಕೊಂಡಿದ್ದಾರೆ. ಆಗ ರಾಜ್ಯದಲ್ಲಿ 1.20 ಕೋಟಿಗೂ ಜನಸಂಖ್ಯೆ ಇತ್ತು. ಈ ಬಾರಿ ಹಾಗಾಗಬಾರದು. ಜಾತಿ– ಧರ್ಮದ ಕಾಲಂಗಳಲ್ಲಿ ಲಿಂಗಾಯತ ಧರ್ಮ ಎಂಬುದನ್ನು ಸ್ಪಷ್ಟವಾಗಿ ಬರೆಯಿರಿ. ಮಾತ್ರವಲ್ಲ; ಅದನ್ನು ಬೇರೆ ಯಾರೂ ತಿದ್ದಿ ಬೇರೆ ಏನೋ ಬರೆಯದಂತೆ ಎಚ್ಚರಿಕೆ ವಹಿಸಿ’ ಎಂದು ಕರೆ ನೀಡಿದರು.

‘ಕಲ್ಯಾಣ ಕ್ರಾಂತಿಯ 2ನೇ ಅಧ್ಯಾಯ’

‘ಈಗ ನಡೆದ ಬಸವ ಸಂಸ್ಕೃತಿ ಅಭಿಯಾನವು ಕಲ್ಯಾಣ ಕ್ರಾಂತಿಯ ಎರಡನೇ ಅಧ್ಯಾಯ. ಇಷ್ಟು ವರ್ಷ ತೆರೆಮರೆ ಹಿಂದೆ ಜೈ ಅಂದವರು ಗೆದ್ದೆತ್ತಿನ ಬಾಲ ಹಿಡಿದವರೆಲ್ಲ ಈಗಲಾದರೂ ಎಚ್ಚೆತ್ತುಕೊಳ್ಳಿ. ಬಸವ ಧರ್ಮ ಸಂಸ್ಥಾಪನೆಗೆ ಬನ್ನಿ. ಇಲ್ಲದಿದ್ದರೆ ನಿಮ್ಮ ಮಠಗಳು ಅಸ್ತಿತ್ವ ಉಳಿಯುವುದಿಲ್ಲ’ ಎಂದು ಚಿಗರಹಳ್ಳಿ ಮರುಳಶಂಕರ ದೇವರ ಗುರುಪೀಠದ ಸಿದ್ಧಬಸವ ಕಬೀರ ಸ್ವಾಮೀಜಿ ಎಚ್ಚರಿಸಿದರು. ‘ಬಸವ ಧರ್ಮಕ್ಕೆ ಬಂದು ನಿಮಗೆ ಆನಂದವಾಗಿದೆಯೇ ಎಂದು ಕೆಲವರು ನನ್ನನ್ನು ಕೇಳುತ್ತಾರೆ. ಈಗ ನಾನು ಘಂಟಾಘೋಷವಾಗಿ ಹೇಳುತ್ತೇನೆ. ಬಸವ ಧರ್ಮವೇ ಶ್ರೇಷ್ಠ ಅನುಕರಣೀಯ. ನನಗೆ ಆನಂದವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.