ಬೆಳಗಾವಿ: ‘ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ವಿರೋಧ ವ್ಯಕ್ತಪಡಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ನಮಗೆ ಸರ್ಕಾರ ಅವಮಾನ ಮಾಡಿದೆ. ಈ ಕಾರಣದಿಂದ ಬಸವರಾಜ ಬೊಮ್ಮಾಯಿ ಅವರು ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಸುವರ್ಣ ವಿಧಾನಸೌಧದ ಬಳಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಸರ್ಕಾರ ಪೊಲೀಸರನ್ನು ಛೂ ಬಿಟ್ಟು ಖಾವಿ ಕುಲಕ್ಕೆ ಅವಮಾನ ಮಾಡಿದೆ. ಈ ಅನ್ಯಾಯವನ್ನು ಲಿಂಗಾಯತ ಹಾಗೂ ಜೈನ ಸಮುದಾಯ ಸಹಿಸಿಕೊಳ್ಳುವುದಿಲ್ಲ’ ಎಂದರು.
‘ಪೊಲೀಸರು ಶ್ರೀಗಳು ಹಾಗೂ ಬಸವ ತತ್ವ ಅನುಯಾಯಿಗಳ ಮೇಲೆ ಅವಾಚ್ಯ ಶಬ್ದ ಬಳಸಿದ್ದಾರೆ. ಈ ರೀತಿಯಾದರೆ ನಮ್ಮಂತಹ ಸ್ವಾಮೀಜಿಗಳ ಶಾಪ ಮುಖ್ಯಮಂತ್ರಿಗೆ ತಟ್ಟದೇ ಇರುವುದಿಲ್ಲ. ನಾವು ಸುವರ್ಣ ವಿಧಾನಸೌಧಕ್ಕೆ ಹೋಗುವಾಗ ಪೊಲೀಸರು ನಮ್ಮ ಮೇಲೆ ಲಾಠಿಪ್ರಹಾರವನ್ನೂ ನಡೆಸಿದ್ದಾರೆ’ ಎಂದು ಆರೋಪಿಸಿದರು.
‘ಮನೆಗಳಲ್ಲಿ ಯಾರು ಏನನ್ನಾದರೂ ತಿನ್ನಲಿ. ಆದರೆ, ಶಾಲೆಗಳಲ್ಲಿ ಮೊಟ್ಟೆ ಕೊಡುವುದಕ್ಕೆ ವಿರೋಧವಿದೆ. ಸಮಾಜದ ಆಹಾರದ ಪದ್ಧತಿ ಕಲುಷಿತಗೊಳಿಸಬಾರದು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.