ಬೆಳಗಾವಿ: ‘ಬಸವರಾಜ ಕಟ್ಟೀಮನಿ ಅವರ ಸಾಹಿತ್ಯದ ಓದು ವಿಶಿಷ್ಟ ಅನುಭವ ನೀಡುತ್ತದೆ’ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ವತಿಯಿಂದ ನಡೆದ ಬಸವರಾಜ ಕಟ್ಟೀಮನಿ ಜನ್ಮ ಶತಮಾನೋತ್ಸವ ವರ್ಷಾಚರಣೆಯ ವಿಶೇಷ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವೈವಿಧ್ಯಮಯ ಕಥನ ಕ್ರಮದಿಂದ ಒಂದು ಕಾಲಘಟ್ಟದ ಸೂಕ್ಷ್ಮತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಮಾರ್ಕ್ಸ್ವಾದದಿಂದ ಪ್ರೇರಿತರಾಗಿ ವೈವಿಧ್ಯಮಯ ವಸ್ತುವಿನ್ಯಾಸಗಳನ್ನು ಹೊಂದಿರುವ ಕಾದಂಬರಿಗಳನ್ನು ನೀಡಿದ್ದಾರೆ’ ಎಂದು ಸ್ಮರಿಸಿದರು.
‘ಅವರ ‘ಜ್ವಾಲಾಮುಖಿಯ ಮೇಲೆ’, ‘ಸ್ವಾತಂತ್ರ್ಯದೆಡೆಗೆ’, ‘ಮಾಡಿ ಮಡಿದವರು’ ಕಾದಂಬರಿಗಳು ಭಾರತೀಯ ಸಾಹಿತ್ಯದಲ್ಲಿ ಸಮಾನಾಂತರವಾಗಿ ಬೆಳೆದು ನಿಂತಿವೆ. ಈಗ ಅವುಗಳ ಪುನರ್ಮೌಲ್ಯೀಕರಣ ಪ್ರಕ್ರಿಯೆ ನಡೆಯಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ್.ಎಂ. ಗಂಗಾಧರಯ್ಯ, ‘ಜಾಗತಿಕ ಸಾಹಿತ್ಯದಲ್ಲಿ ಮಾರ್ಕ್ಸ್ವಾದದ ಮೂಲಕ ಬಹು ದೊಡ್ಡ ಸಾಹಿತ್ಯ ರಚನೆಯಾಗಿರುವುದನ್ನು ಕಾಣುತ್ತೇವೆ. ರಷ್ಯಾದ ಗಾರ್ಕಿ, ಇಂಗ್ಲೆಂಡ್ನ ಇ.ಎಂ. ಪ್ರಾಸ್ಟರ್, ಭಾರತದ ಮುನ್ಷಿ ಪ್ರೇಮಚಂದ, ಕನ್ನಡದ ಕಟ್ಟೀಮನಿ ಅವರು ಸಮಾನಾಂತರವಾಗಿ ನಿಂತ ಲೇಖಕರಾಗಿದ್ದಾರೆ. ಭಾರತೀಯ ಸಾಹಿತ್ಯದಲ್ಲಿ ಅವರದ್ದು ಮಹತ್ವದ ಪಾತ್ರ’ ಎಂದು ತಿಳಿಸಿದರು.
ಡಾ.ಗಜಾನನ ನಾಯ್ಕ, ಡಾ.ಶೋಭಾ ನಾಯಕ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ.ಪಿ. ನಾಗರಾಜ ಇದ್ದರು. ಡಾ.ಮಹೇಶ ಗಾಜಪ್ಪನವರ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.