ಬೈಲಹೊಂಗಲ: ತಾಲ್ಲೂಕಿನ ಉಡಿಕೇರಿ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿದ್ದ ಮಗ ತಾಯಿಯನ್ನು ಕೊಲೆ ಮಾಡಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಮಹಾದೇವಿ ಗುರಪ್ಪ ತೊಲಗಿ(70) ಕೊಲೆಯಾದ ಮಹಿಳೆ. ಈರಣ್ಣ ಗುರಪ್ಪ ತೊಲಗಿ (34) ಆರೋಪಿ.
‘ಆರೋಪಿ ಈರಣ್ಣ ಇಲೆಕ್ಟ್ರಿಕಲ್ ಕೆಲಸ ಮಾಡಿಕೊಂಡು ಬೆಂಗಳೂರಿನಲ್ಲಿದ್ದ, ವರ್ಷದ ಹಿಂದೆ ಹೆಂಡತಿ ಜೊತೆ ಜಗಳ ಮಾಡಿಕೊಂಡು ಉಡಿಕೇರಿಯಲ್ಲಿ ತಾಯಿ ಜೊತೆ ವಾಸವಾಗಿದ್ದ, ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಕುಡಿತದ ದಾಸನಾಗಿದ್ದ. ತಾಯಿ ಹೆಸರಿನಲ್ಲಿರುವ ಒಂದು ಎಕರೆ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಡು ಎಂದು ಪದೇ ಪದೇ ಗಲಾಟೆ ಮಾಡುತ್ತಿದ್ದ. ಶನಿವಾರ ರಾತ್ರಿ ಕುಡಿದ ಅಮಲಿನಲ್ಲಿ ಮನೆಗೆ ಬಂದ ಈರಣ್ಣ ಜಮೀನು ಬರೆದುಕೊಡು ಎಂದು ಆಕ್ರೋಶಗೊಂಡು ತಾಯಿ ಜೊತೆ ಜಗಳವಾಡಿದ್ದಾನೆ. ಈ ವೇಳೆ ಒಲೆಯಲ್ಲಿರುವ ಕಟ್ಟಿಗೆಯಿಂದ ತಾಯಿ ತಲೆಗೆ ಹೊಡೆದಿದ್ದು, ಹೊಡೆತದ ರಭಸಕ್ಕೆ ಗೋಡೆಗೆ ಡಿಕ್ಕಿ ಹೊಡೆದು ಬಿದ್ದ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ’ ಎಂದು ಪೊಲೀಸರು ತಿಳಿಸಿದರು.
ಸ್ಥಳಕ್ಕೆ ಡಿವೈಎಸ್ಪಿ ರವಿ ನಾಯ್ಕ, ಪಿಎಸ್ ಐಗಳಾದ ನಂದೀಶ, ಪ್ರವೀಣ ಕೋಟಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ನಡೆಸಿದರು.
ಆರೋಪಿ ಈರಣ್ಣ ನನ್ನು ಬಂಧಿಸಲಾಗಿದೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.