ADVERTISEMENT

ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಿ

ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಕುಲಪತಿ ಡಾ.ದೇವಾನಂದ ಶಿಂಧೆ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 17:00 IST
Last Updated 7 ಡಿಸೆಂಬರ್ 2018, 17:00 IST
ವಿಜ್ಞಾನ ಸಾಹಿತ್ಯ ಸಮ್ಮೇಳನದಲ್ಲಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು
ವಿಜ್ಞಾನ ಸಾಹಿತ್ಯ ಸಮ್ಮೇಳನದಲ್ಲಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು   

ನಿಪ್ಪಾಣಿ: ‘21ನೇ ಶತಮಾನದಲ್ಲೂ ಮೂಢನಂಬಿಕೆಯಿಂದ ಕೆಲವರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ವೈಜ್ಞಾನಿಕ ವಿಧಾನದಿಂದ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸಾಧ್ಯ’ ಎಂದು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಕುಲಪತಿ ಡಾ.ದೇವಾನಂದ ಶಿಂಧೆ ಹೇಳಿದರು.

ತಾಲ್ಲೂಕಿನ ಕುರ್ಲಿ ಗ್ರಾಮದಲ್ಲಿ ಶುಕ್ರವಾರ ಆರಂಭವಾದ 5ನೇ ಗ್ರಾಮೀಣ ವಿಜ್ಞಾನ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಸಂಶೋಧನೆ ಮತ್ತು ವಿಜ್ಞಾನದಿಂದಲೂ ಮೌಢ್ಯತೆ ಪಸರಿಸುವ ಚಮತ್ಕಾರಗಳನ್ನು ಹೋಗಲಾಡಿಸಬಹುದು. ವಿದ್ಯಾರ್ಥಿಗಳಲ್ಲಿ ಈ ಜಾಗರೂಕತೆ ಅತ್ಯವಶ್ಯ. ಅವರಿಗೆ ವಿಜ್ಞಾನದ ಮಹತ್ವ ಮೂಡಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಕುರ್ಲಿ ಗ್ರಾಮದಲ್ಲಿ ಇಂತಹ ವಿಜ್ಞಾನ ಸಮ್ಮೇಳನ ನಡೆಯುತ್ತಿರುವುದು ಶ್ಲಾಘನೀಯ’ ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಮನಗೌಡ, ಕಾಗಲ್‌ನ ಬಿಇಒ ಗಣಪತಿ ಕಮಳಕರ, ಆಬಾಸಾಹೇಬ ದೇಶಮುಖ ಮಾತನಾಡಿದರು. ಕುರ್ಲಿ ಗ್ರಾಮ ಪಂಚಾಯ್ತಿಯ ಪಿಡಿಒ ಟಿ.ಕೆ. ಜಗದೇವ ಮತ್ತು ಉಪಾಧ್ಯಕ್ಷೆ ರಾಜಶ್ರೀ ಚೌಗುಲೆ ಗ್ರಂಥ ಮತ್ತು ವಿಜ್ಞಾನ ದಿಂಡಿಯನ್ನು ಉದ್ಘಾಟಿಸಿದರು.

ನಂತರ ‘ಶಹೀದ ಜವಾನ ಪ್ರಕಾಶ ಪುಂಡಲಿಕ ಜಾಧವ ವೇದಿಕೆ’ಯನ್ನು ಮುಂಬಯಿಯ ರಾಜ್ಯ ಮರಾಠಿ ವಿಕಾಸ ಸಂಸ್ಥೆಯ ಕಾರ್ಯಕಾರಿ ಅಧಿಕಾರಿ ಗಿರೀಶ ಪತಕೆ ಉದ್ಘಾಟಿಸಿದರು. ವಿಜ್ಞಾನ ಸಮ್ಮೇಳನವನ್ನು ಶಾಸಕಿ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು. ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತರುಣ ಮಂಡಳಿಯು ಆಕರ್ಷಕ ಪಿರಮಿಡ್‌ ಪ್ರಾತ್ಯಕ್ಷಿಕೆಯನ್ನು ಸಾದರಪಡಿಸಿತು.

ತಾಲ್ಲೂಕು ಪಂಚಾಯ್ತಿ ಸದಸ್ಯ ಕಿರಣ ನಿಕಾಡೆ ಮತ್ತು ಗ್ರಾಮ ಪಂಚಾಯ್ತಿ ಸದಸ್ಯ ಅಮೋಲ ಮಾಳಿ ಚಾಲನೆ ನೀಡಿದರು. ಎರಡನೇ ಅವಧಿಯಲ್ಲಿ ‘ಮಾನವನ ಪ್ರಗತಿ’ ವಿಷಯದ ಕುರಿತು ಗಡಹಿಂಗ್ಲಜ್‌ನ ಜಾಗೃತಿ ಜೂನಿಯರ್‌ ಕಾಲೇಜಿನ ಪ್ರೊ.ಅಶ್ಫಾಕ್‌ ಮಕಾನದಾರ್ ಉಪನ್ಯಾಸ ನೀಡಿದರು. ಸಾವರ್ಡೆಯ ಎಸ್‌.ಎಸ್‌. ಹಜಾರೆ ವೈಜ್ಞಾನಿಕ ಪ್ರಾಯೋಗಿಕ ಕಾರ್ಯಕ್ರಮ ಸಾದರಪಡಿಸಿದರು.

ಕೆಒಎಫ್‌ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ತಾನಾಜಿ ಪಾಟೀಲ, ಅರುಣ ಪಾಟೀಲ, ಜಯಸ ಮಾಳಿ, ಎಂ.ಡಿ. ಮುಲ್ಲಾ ಇದ್ದರು. ಅಮರ ಶಿಂತ್ರೆ ಸ್ವಾಗತಿಸಿದರು. ಸಮ್ಮೇಳನ ಸಮಿತಿಯ ಪ್ರಮುಖ ಎಸ್‌.ಎಸ್‌. ಚೌಗುಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.