ಬೆಳಗಾವಿ: ‘ಬಿಜೆಪಿಯ ಇಬ್ಬರು ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅಸಹಕಾರದಿಂದ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ದೂರಿದರು.
ಇಲ್ಲಿ ಮಂಗಳವಾರ ಮಾತನಾಡಿದ ಅವರು, ‘ಒಂದು ವರ್ಷದಿಂದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆದಿಲ್ಲ. ಪದೇ ಪದೇ ಸಭೆ ಮುಂದಕ್ಕೆ ಹೋಗುತ್ತಿರುವುದಕ್ಕೆ ಬಿಜೆಪಿಯ ಶಾಸಕರೆ ಕಾರಣ. ಅವರು ಅಧ್ಯಕ್ಷ ಘೂಳಪ್ಪ ಹೊಸಮನಿ ಅವರಿಗೆ ಸಹಕಾರ ನೀಡುತ್ತಿಲ್ಲ. ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರು ಕೂಡ ಭಾಗವಹಿಸಲು ಆ ಶಾಸಕರು ಬಿಡುತ್ತಿಲ್ಲ. ಈ ಬಗ್ಗೆ ಬುಡಾ ಅಧ್ಯಕ್ಷರೆ ಹೇಳಿಕೆ ನೀಡಿದ್ದಾರೆ. ಇದಕ್ಕೆ ಶಾಸಕರೆ ಸ್ಪಷ್ಟನೆ ಕೊಡಬೇಕಾಗುತ್ತದೆ’ ಎಂದರು.
‘ಬುಡಾದಲ್ಲಿ ನಾವು ಮಂಜೂರು ಮಾಡಿದ ಕೆಲಸಗಳು ಇನ್ನೂ ಬಾಕಿ ಇವೆ. ಅನುದಾನ, ಸಹಾಯಧನ, ಪ್ರೋತ್ಸಾಹಧನ ಕಡಿತವಾಗಿದೆ. ಇದಕ್ಕೆ ಬಿಜೆಪಿ ಶಾಸಕರೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಹೇಳಿದರು.
‘ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಂದು ತಿಂಗಳು ಕಳೆದರೂ ಮೇಯರ್–ಉಪಮೇಯರ್ ಆಯ್ಕೆಯಾಗಿಲ್ಲ. ಆ ಚುನಾವಣೆ ನಡೆಯಲು ಒಂದು ವರ್ಷ ಬೇಕೆ ಬೇಕು ಎನಿಸುತ್ತದೆ. ಏಕೆಂದರೆ, ಬೆಳಗಾವಿಯಲ್ಲಿ ವ್ಯವಸ್ಥೆ ಹಾಗೆಯೇ ಇದೆ. ಮೂರು ವರ್ಷಗಳಿಂದ ಸ್ಥಳೀಯ ಶಾಸಕರೆ ಪಾಲಿಕೆಯಲ್ಲಿ ದರ್ಬಾರ್ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಮುಂಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಬೆಳಗಾವಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.