ADVERTISEMENT

ದಾಖಲೆ ಆಧರಿಸಿಯೇ ಡಿಸಿಸಿ ಬ್ಯಾಂಕ್‌ನಿಂದ ಸಾಲ: ಜೊಲ್ಲೆ, ಜಾರಕಿಹೊಳಿ ಜಂಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 13:11 IST
Last Updated 9 ಫೆಬ್ರುವರಿ 2026, 13:11 IST
   

ಬೆಳಗಾವಿ: ‘ಭದ್ರವಾದ ದಾಖಲೆ ಇಲ್ಲದೆ ಯಾರಿಗೂ ಸಾಲ ಕೊಡುತ್ತಿಲ್ಲ. ಭದ್ರತೆ ಆಧರಿಸಿಯೇ ಡಿಸಿಸಿ ಬ್ಯಾಂಕ್‌ ಮೂಲಕ ಎಲ್ಲ ರೀತಿಯ ಸಾಲಗಳನ್ನು ನೀಡಲಾಗಿದೆ. ಮೂರು ತಿಂಗಳಲ್ಲಿ ಠೇವಣಿ ಮೊತ್ತವೂ ₹500 ಕೋಟಿ ಹೆಚ್ಚಾಗಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾಂಕಿನ ಬಗ್ಗೆ ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಬ್ಯಾಂಕ್‌ ಸುರಕ್ಷಿತವಾಗಿಲ್ಲ ಎಂದು ಹೇಳುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಬ್ಯಾಂಕ್‌ ಈಗಲೂ ಸುರಕ್ಷಿತವಾಗಿಯೇ ಇದೆ. ಯಾರ ಮಾತು ಕೇಳಿ ಠೇವಣಿದಾರರು ಮತ್ತು ರೈತರು ಮೋಸ ಹೋಗಬಾರದು’ ಎಂದರು.

‘ಕಳೆದ ವರ್ಷ ನವೆಂಬರ್‌ನಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದೆ. ಈಗ ₹500 ಕೋಟಿ ಠೇವಣಿ ಹೆಚ್ಚಳವಾಗಿದ್ದು, ಠೇವಣಿ ಮೊತ್ತ ₹5,575 ಕೋಟಿಗೆ ಏರಿಕೆಯಾಗಿದೆ. ಖಾರೀಫ್‌ ಋತುವಿನಲ್ಲಿ ಠೇವಣಿದಾರರು ಮತ್ತು ರೈತರು ತಮ್ಮ ಕೃಷಿ ಅಗತ್ಯ ಪೂರೈಸಿಕೊಳ್ಳಲು ಠೇವಣಿ ಹಿಂಪಡೆಯುತ್ತಾರೆ. ಕೃಷಿ ಉತ್ಪನ್ನ ಮಾರಾಟವಾದ ನಂತರ ಮತ್ತೆ ಇರಿಸುತ್ತಾರೆ. ಈಗ ಬ್ಯಾಂಕ್‌ ಪ್ರಗತಿ ಹಾದಿಯಲ್ಲಿದೆ’ ಎಂದು ತಿಳಿಸಿದರು.

ADVERTISEMENT

‘4.75 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹3,700 ಕೋಟಿಯವರೆಗೆ ಸಾಲ ಕೊಟ್ಟಿದ್ದೇವೆ. ರಾಜ್ಯದಲ್ಲೇ ರೈತರಿಗೆ ಹೆಚ್ಚಿನ ಸಾಲವನ್ನು ಬೆಳಗಾವಿ ಡಿಸಿಸಿ ಬ್ಯಾಂಕ್‌ ಕೊಟ್ಟಿದೆ’ ಎಂದು ಹೇಳಿದರು.

‘ಭದ್ರತೆ ನೋಡಿಕೊಂಡೇ ನಾವು ಯಾರಿಗಾದರೂ ವಾಣಿಜ್ಯ ಸಾಲ ಕೊಡುದ್ದೇವೆ. ಗುತ್ತಿಗೆದಾರರೊಬ್ಬರಿಗೆ ಭದ್ರತೆ ಆಧರಿಸಿ ₹120 ಕೋಟಿ ಸಾಲ ಕೊಟ್ಟಿದ್ದೇವೆ. ಇದಕ್ಕಾಗಿ ಬೆಳಗಾವಿಯಲ್ಲಿನ ನಾಲ್ಕು ಎಕರೆ ಜಾಗದ ಪತ್ರ ಹಾಗೂ ವಿವಿಧ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ ₹700 ಕೋಟಿ ಅನುದಾನ ಸರ್ಕಾರದಿಂದ ಬರಬೇಕಿರುವ ದಾಖಲೆಗಳನ್ನು ಅವರು ಭದ್ರತೆ ರೂಪದಲ್ಲಿ ಬ್ಯಾಂಕ್‌ನಲ್ಲಿ ಇರಿಸಿದ್ದಾರೆ. ತಾವು ಪಡೆದ ಸಾಲಕ್ಕೆ ₹8 ಕೋಟಿ ಬಡ್ಡಿ ನಿಯಮಿತವಾಗಿ ಕಟ್ಟಿದ್ದಾರೆ. ಮಾರ್ಚ್‌ನಲ್ಲಿ ಸಾಲದ ಮೊತ್ತ ಮರುಪಾವತಿಸುವುದಾಗಿ ತಿಳಿಸಿದ್ದಾರೆ’ ಎಂದರು.

‘ಬ್ಯಾಂಕಿನ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಗೋಕಾಕದ ಮಹಾಂತೇಶ ಕಡಾಡಿ ಅವರಿಗೆ ಕಾನೂನು ನೋಟಿಸ್‌ ಕೊಟ್ಟಿದ್ದೇವೆ. ಅವರು ತಮ್ಮ ಆರೋಪ ಹಿಂದಕ್ಕೆ ತೆಗೆದುಕೊಳ್ಳದಿದ್ದರೆ ಮತ್ತು ಕ್ಷಮೆ ಕೇಳದಿದ್ದರೆ, ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ಕೊಟ್ಟರು.

‘ವಾಣಿಜ್ಯ ಸಾಲಗಳನ್ನು ನೀಡದೆ ಬ್ಯಾಂಕ್‌ ನಡೆಸಲಾಗದು. ಬ್ಯಾಂಕಿನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಮಾರ್ಚ್‌ 31ಕ್ಕೆ ಪ್ರಸಕ್ತ ಆರ್ಥಿಕ ವರ್ಷ ಮುಗಿಯುತ್ತದೆ. ಆಗ ಬ್ಯಾಂಕಿನ ಸಮಗ್ರ ಚಿತ್ರಣವನ್ನು ನಿಮ್ಮ ಮುಂದೆ ತೆರೆದಿಡುತ್ತೇವೆ. ಶೀಘ್ರ ನಡೆಯಲಿರುವ ಸಭೆಯಲ್ಲಿ ಮೂರು ಹೊಸ ಯೋಜನೆಗಳಿಗೂ ಚಾಲನೆ ಕೊಡಲಿದ್ದೇವೆ’ ಎಂದರು.

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ರಾಜು ಕಾಗೆ, ನಿರ್ದೇಶಕರಾದ ಚನ್ನರಾಜ ಹಟ್ಟಿಹೊಳಿ, ಮಹಾಂತೇಶ ದೊಡ್ಡಗೌಡರ, ಅಪ್ಪಾಸಾಹೇಬ ಕುಲಗೂಡೆ, ಅರವಿಂದ ಪಾಟೀಲ, ರಾಹುಲ ಜಾರಕಿಹೊಳಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.