ಬೆಳಗಾವಿಯಲ್ಲಿ ಸವದಿ ಹಾಗೂ ಜಾರಕಿಹೊಳಿ ಬೆಂಬಲಿಗರ ಮಧ್ಯೆ ನಡೆದ ಗಲಾಟೆ
ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ಭಾನುವಾರ ನಡೆದ ಮತದಾನದ ವೇಳೆ ಜಾರಕಿಹೊಳಿ ಸಹೋದರರ ಬಣ ಹಾಗೂ ಶಾಸಕ ಲಕ್ಷ್ಮಣ ಸವದಿ ಬಣಗಳ ಮುಖಂಡರು ಹೊಡೆದಾಡಿಕೊಂಡರು.
ಜಾರಕಿಹೊಳಿ ಗುಂಪಿನವರು ತಮ್ಮ ಡೆಲಿಗೇಷನ್ ಫಾರ್ಮ್ಗಳನ್ನು ಕದ್ದು ಇಟ್ಟುಕೊಂಡಿದ್ದಾರೆ. ಮತದಾನ ಮಾಡಲು ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿ ಸವದಿ ಬಣದ ಬೆಂಬಲಿಗರು ಕ್ಯಾತೆ ತೆಗೆದರು. ಜಾರಕಿಹೊಳಿ ಬಣದ ಅಭ್ಯರ್ಥಿ ವಿರುದ್ಧ ಆರೋಪ ಮಾಡಿ ಗಲಾಟೆ ಆರಂಭಿಸಿದರು.
'ಜಾರಕಿಹೊಳಿ ಪೆನಲ್ ಅಭ್ಯರ್ಥಿ ಅಪ್ಪಾಸಾಹೇಬ ಕುಲಗೂಡೆ ಅವರು ಮತದಾನದ 40 ಡೆಲಿಗೇಷನ್ ಫಾರ್ಮ್ ಕೊಡುತ್ತಿಲ್ಲ' ಎಂದು ಆರೋಪಿಸಿದರು. ಇದೇ ವಿಚಾರವಾಗಿ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈಕೈ ಮಿಲಾಯಿಸಿದರು.
ಸವದಿ ಹಾಗೂ ಕತ್ತಿ ಬಣದಿಂದ ಬಸವಗೌಡ ಆಸಂಗಿ ಕಣಕ್ಕಿಳಿದಿದ್ದಾರೆ. ಅವರ ಪರವಾದ ಡೆಲಿಗೇಟರುಗಳ ಮತಹಕ್ಕು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದರು.
ಆಗ ಎರಡೂ ಕಡೆಯ ಬೆಂಬಲಿಗರ ಮಧ್ಯೆ ನೂಕಾಟ- ತಳ್ಳಾಟ ನಡೆಯಿತು. ಕೆಲವರು ಗುಂಪಿನಲ್ಲಿ ಹೊಡೆದಾಡಿಕೊಂಡರು.
ಸ್ಥಳಕ್ಕೆ ಆಗಮಿಸಿದ ಡಿಸಿಪಿ ನಾರಾಯಣ ಭರಮನಿ ಚುನಾವಣಾಧಿಕಾರಿಗೆ ದೂರು ನೀಡುವಂತೆ ಸವದಿ ಬೆಂಬಲಿಗರಿಗೆ ತಿಳಿಸಿದರು.
ನಂತರ 15ಕ್ಕೂ ಹೆಚ್ಚು ಜನ ಕ್ಯಾಂಪ್ ಠಾಣೆಗೆ ತೆರಳಿ 24 ಮಂದಿಯ ಡೆಲಿಗೇಷನ್ ಫಾರ್ಮ್ಗಳನ್ನು ಕದಿಯಲಾಗಿದೆ ಎಂದು ದೂರು ದಾಖಲಿಸಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.