ADVERTISEMENT

ಬೆಳಗಾವಿ | ಗರ್ಭಕೋಶದ ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ; ಮಹಿಳೆಗೆ ಮರುಜೀವ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 3:03 IST
Last Updated 24 ನವೆಂಬರ್ 2025, 3:03 IST
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಗರ್ಭದಲ್ಲಿ ಬೆಳೆದಿದ್ದ ಮಾಂಸದ ಗಡ್ಡೆ ಹೊರತೆದ ಶಸ್ತ್ರಚಿಕಿತ್ಸಾ ತಂಡ
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಗರ್ಭದಲ್ಲಿ ಬೆಳೆದಿದ್ದ ಮಾಂಸದ ಗಡ್ಡೆ ಹೊರತೆದ ಶಸ್ತ್ರಚಿಕಿತ್ಸಾ ತಂಡ   

ಬೆಳಗಾವಿ: ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 3.7 ಕೆ.ಜಿ ತೂಕದ ಫ್ರೈಬ್ರಾಯ್ಡ್‌ ಗರ್ಭಕೋಶವನ್ನು ತೆಗೆದುಹಾಕುವಲ್ಲಿ ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್)ಯ ಸ್ತ್ರೀರೋಗ ವಿಭಾಗದ ವೈದ್ಯರು ಯಶಸ್ವಿಯಾಗಿದ್ದಾರೆ.

42 ವರ್ಷದ ಮಹಿಳೆಗೆ ಗರ್ಭಾಶಯದಲ್ಲಿ ಗಡ್ಡೆ ಬೆಳೆದಿತ್ತು. ಇದರಿಂದ ಮುಟ್ಟಿನ ಸಂದರ್ಭದಲ್ಲಿ ತೀವ್ರ ರಕ್ತಸ್ರಾವವಾಗಿ, ರಕ್ತಹೀನತೆಯೂ ಉಂಟಾಗಿತ್ತು. ನೋವು ಉಲ್ಬಣಗೊಂಡಿದ್ದರಿಂದ ಚಿಕಿತ್ಸೆಗೆಗಾಗಿ ಇತ್ತೀಚೆಗೆ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗರ್ಭಾಶಯವು 32 ವಾರಗಳ ಗರ್ಭಧಾರಣೆ ಗಾತ್ರಕ್ಕಿಂತ ದೊಡ್ಡದಾಗಿರುವುದು ಕಂಡುಬಂದಿತು. ಶಸ್ತ್ರಚಿಕಿತ್ಸೆ ಬಳಿಕ ಮಹಿಳೆ ಗುಣಮುಖರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರಾದ ವಸಂತ ಕಬ್ಬೂರ, ಕೆ.ಎಸ್.ಲಕ್ಷ್ಮೀ, ನಿಖಿಲ್ ವೇರ್ಣೇಕರ್, ಗೌಸಿಯಾ ಗೋರಿಖಾನ್, ಅರಿವಳಿಕೆ ತಜ್ಞ ಸಾಜಿದ್ ಹುಸೇನ್ ನದಾಫ, ಪೂರ್ಣಿಮಾ, ಅಡ್ರುಸ್ಟಾ, ರೆನಿಟಾ ಡಿಕೋನ್ಸಾ, ನರ್ಸಿಂಗ್ ಅಧಿಕಾರಿ ಮಲ್ಲವ್ವ ಕಾಡೇಶನವರ ಮತ್ತು ಇತರೆ ಸಿಬ್ಬಂದಿ ಈ ತಂಡದಲ್ಲಿದ್ದರು.

ADVERTISEMENT

ಬಿಮ್ಸ್ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ, ಮುಖ್ಯ ಆಡಳಿತ ಅಧಿಕಾರಿ ಡಾ. ಸಿದ್ದು ಹುಲ್ಲೋಳಿ, ವೈದ್ಯಕೀಯ ಅಧೀಕ್ಷಕ ಡಾ. ಈರಣ್ಣ ಪಲ್ಲೇದ, ಸ್ಥಳೀಯ ವೈದ್ಯಾಧಿಕಾರಿ ಡಾ. ಸರೋಜಾ ತಿಗಡಿ ಅಭಿನಂದಿಸಿದ್ದಾರೆ.

‘ಆರು ತಿಂಗಳಿಂದ ಮಹಿಳೆ ಸಮಸ್ಯೆ ಅನುಭವಿಸುತ್ತಿದ್ದರು. ಮೊದಲಿಗೆ ಕ್ಯಾನ್ಸರ್ ಪರೀಕ್ಷೆ ಮಾಡಿದೆವು. ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುವಂತೆ ಮಾಡಿ, ಶಸ್ತ್ರಚಿಕಿತ್ಸೆ ಮೂಲಕ ತೆಗೆದ ಗಡ್ಡೆಯ ಮಾದರಿಯನ್ನು ಹಿಸ್ಟೊಪೆಥಾಲಾಜಿಗೆ ಕಳಿಸಿಕೊಟ್ಟೆವು. ಅದರ ವರದಿ ಬಿನಾಯಿ ಫ್ರೈಬ್ರಾಯ್ಡ್ ಎಂದು ಬಂದಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ’ ಎಂದು ವೈದ್ಯೆ ಲಕ್ಷ್ಮೀ ತಿಳಿಸಿದ್ದಾರೆ.

‘ಹಾರ್ಮೋನ್‌ ವ್ಯತ್ಯಯದಿಂದ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸುತ್ತದೆ. ಗಡ್ಡೆ ಇದ್ದವರಿಗೆ ಮಕ್ಕಳಾಗುವುದಿಲ್ಲ. ಆದರೆ, ಈ ಮಹಿಳೆಗೆ ನಾಲ್ಕು ಮಕ್ಕಳಾಗಿದ್ದು ಸವಾಲಾಗಿತ್ತು’ ಎಂದರು.

ಮಹಿಳೆಯೊಬ್ಬರ ಗರ್ಭದಲ್ಲಿ ಬೆಳೆದಿದ್ದ 3.7 ಕೆಜಿ ತೂಕದ ಮಾಂಸದ ಗಡ್ಡೆ
ಈ ಗಡ್ಡೆ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ₹1.5 ಲಕ್ಷ ಖರ್ಚಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆ ಇದೆ. ಎಲ್ಲ ಸೌಕರ್ಯಗಳೂ ಇವೆ
ಡಾ.ಕೆ.ಎಸ್.ಲಕ್ಷ್ಮೀ ಸ್ತ್ರೀರೋಗ ತಜ್ಞೆ ಬಿಮ್ಸ್‌
ಗರ್ಭಾಶಯ ಗಡ್ಡೆ ಅಪಾಯಕಾರಿ. ಶಸ್ತ್ರಚಿಕಿತ್ಸೆ ತುಂಬಾ ಕ್ಲಿಷ್ಟಕರವಾಗಿತ್ತು. ಕರಳು ಸೇರಿ ಮತ್ತಿತರ ಅಂಗಾಂಗಗಳಿಗೆ ತೊಂದರೆ ಆಗದಂತೆ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ
ಡಾ. ವಸಂತ ಕಬ್ಬೂರ ಸ್ತ್ರೀರೋಗ ತಜ್ಞ ಬಿಮ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.