ಬೆಳಗಾವಿ: ನಗರ ಹೊರವಲಯದ ಮರಾಠಾ ಮಂದಳ ಎಂಜಿನಿಯರಿಂಗ್ ಕಾಲೇಜು ಎದರಿಗೆ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಶನಿವಾರ ಬೈಕಿಗೆ ಲಾರಿ ಡಿಕ್ಕಿ ಹೊಡೆದು, ಮಹಿಳೆ ಸ್ಥಳದಲ್ಲೇ ಮೃತಪಟ್ಟರು.
ಮೃತ ಮಹಿಳೆ ಹೆಸರು ಗೊತ್ತಾಗಿಲ್ಲ. ಪತಿ– ಪತ್ನಿ ಬೈಕ್ ಮೇಲೆ ಹೊರಟಿದ್ದರು. ಹಿಂದಿನಿಂದ ಬಂದ ಲಾರಿ ಬೈಕಿಗೆ ಗುದ್ದಿತು. ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಪುಟಿದು ರಸ್ತೆ ಮೇಲೆ ಬಿದ್ದರು. ಲಾರಿ ಅವರ ಮೇಲೆ ಹರಿಯಿತು. ತಲೆಗೆ ತೀವ್ರ ಪೆಟ್ಟಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು.
ಲಾರಿ ಗುದ್ದಿದ ರಭಸಕ್ಕೆ ಸವಾರ ಬೈಕ್ ಸಮೇತ ರಸ್ತೆ ಬದಿಗೆ ಬಿದ್ದರು. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಪತ್ನಿ ಶವದ ಮುಂದೆ ಕುಳಿತು ರೋಧಿಸುತ್ತಿದ್ದ ವ್ಯಕ್ತಿಯ ಸಹಾಯಕ್ಕೆ ಯಾರೂ ಬರಲಿಲ್ಲ. ತಮ್ಮ ಮೊಬೈಲ್ ಮೂಲಕ ಕರೆ ಮಾಡಿ ಅವರು ಬಂಧು, ಮಿತ್ರರಿಗೆ ಬರಹೇಳಿದರು. ರಕ್ತಸಿಕ್ತವಾಗಿದ್ದ ಪತ್ನಿಯ ಮುಖವನ್ನು ಕೈಯಲ್ಲಿಟ್ಟುಕೊಂಡು ರೋಧಿಸುತ್ತಿದ್ದ ದೃಶ್ಯ ಮನಕಲಕಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.