ಬೆಳಗಾವಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದ ಕಾರಣ ಎಲ್ಲ ತಾಲ್ಲೂಕುಗಳ ಅಂಗಣವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ, ಕಾಲೇಜುಗಳಿಗೆ ಬುಧವಾರ (ಆ.20) ಕೂಡ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ಸೋಮವಾರ ಹಾಗೂ ಮಂಗಳವಾರ ಕೆಲವು ತಾಲ್ಲೂಕುಗಳಲ್ಲಿ ಮಾತ್ರ ರಜೆ ನೀಡಲಾಗಿತ್ತು. ಆದರೆ, ಭಾರತೀಯ ಹವಾಮಾನ ಇಲಾಖೆಯು ಆ.19ರಿಂದ ಜಿಲ್ಲೆಯಲ್ಲಿ ‘ರೆಡ್ ಅಲರ್ಟ್’ ಘೋಷಣೆ ಮಾಡಿದ ಕಾರಣ, ಎಲ್ಲ ತಾಲ್ಲೂಕುಗಳಲ್ಲೂ ರಜೆ ಘೋಷಣೆ ಮಾಡಲಾಗಿದೆ.
ಇನ್ನೊಂದೆಡೆ, ಬೆಳಗಾವಿ ನಗರ ಹಾಗೂ ತಾಲ್ಲೂಕಿನಾದ್ಯಂತ ನಿರಂತರ ಮಳೆ ಸುರಿಯುತ್ತಿದೆ. ಕಳೆದ ಮೂರು ದಿನಗಳಿಂದ ಸುರಿದ ಮಳೆಯ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೆಚ್ಚು ಜನರು ಹೊರಗಡೆ ಓಡಾಡದೇ ಮನೆ ಸೇರಿಕೊಂಡಿದ್ದಾರೆ.
ಬೆಳಗಾವಿ ತಾಲ್ಲೂಕಿನಾದ್ಯಂತ ಇರುವ ಭತ್ತದ ಗದ್ದೆಗಳಿಗೆ ಅಪಾರ ಪ್ರಮಾಣ ನೀರು ನುಗ್ಗಿದೆ. ನಾಲ್ಕು ದಿನಗಳಿಂದಲೂ ಭತ್ತದ ಬೆಳೆ ನೀರಿನಲ್ಲಿ ಮುಳುಗಿದ್ದು, ಹಾನಿ ಸಂಭವಿಸುವ ಆತಂಕ ಎದುರಾಗಿದೆ.
ನಿರಂತರ ಮಳೆಯ ಕಾರಣ ಕಬ್ಬು, ಸೋಯಾಬಿನ್, ಜೋಳ, ಭತ್ತ ಹಾಗೂ ಹೆಸರು ಬೆಳೆಗಳಿಗೆ ಕೀಟ ಹಾಗೂ ರೋಗಬಾಧೆ ತಾಗುವ ಆತಂಕವೂ ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.