ADVERTISEMENT

ಅಥಣಿ: ಕನಸು ಮೂಡಿಸಿದ ಪಶು ವೈದ್ಯಕೀಯ ಕಾಲೇಜು

12 ವರ್ಷದ ವನವಾಸ ಅನುಭವಿಸಿದ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 8:26 IST
Last Updated 11 ಆಗಸ್ಟ್ 2023, 8:26 IST
ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮದಲ್ಲಿ ನಿರ್ಮಿಸಿದ ಪಶು ವೈದ್ಯಕೀಯ ಕಾಲೇಜು
ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮದಲ್ಲಿ ನಿರ್ಮಿಸಿದ ಪಶು ವೈದ್ಯಕೀಯ ಕಾಲೇಜು   

ಪರಶುರಾಮ ನಂದೇಶ್ವರ

ಅಥಣಿ: ಶಾಸಕ ಲಕ್ಷ್ಮಣ ಸವದಿ ಅವರ ಕನಸಿನ ಕೂಸಾದ ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆಗೆ ಸಿದ್ಧಗೊಂಡಿದೆ. ಆ. 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಭಾಗದ ರೈತರ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ದೊರಕಲಿ ಎಂಬ ಉದ್ದೇಶದಿಂದ ಆರಂಭಿಸಿದ ಈ ಕಾಲೇಜು ಹೊಸ ಕನಸುಗಳನ್ನು ಹುಟ್ಟುಹಾಕಿದೆ.

ಜಿಲ್ಲಾ ಕೇಂದ್ರದಲ್ಲಿ ಆಗಬೇಕಾದ ಪಶುವೈದ್ಯಕೀಯ ಮಹಾ ವಿದ್ಯಾಲಯವನ್ನು ಗ್ರಾಮೀಣ ಪ್ರದೇಶಕ್ಕೆ ತರುವಲ್ಲಿ ಲಕ್ಷ್ಮಣ ಸವದಿ ಯಶಸ್ವಿಯಾಗಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಬಿ.ಎಸ್‌. ಯಡಿಯುರಪ್ಪ ಅವರ ಮೇಲೆ ಒತ್ತಡ ತಂದು ಅಥಣಿ ತಾಲ್ಲೂಕಿನ ಕೊಕಟನೂರಿನಲ್ಲಿ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿದ್ದರು.

ADVERTISEMENT

211 ಎಕರೆ ವಿಸ್ತಾರವಾದ ಜಮೀನಿನಲ್ಲಿ 2012ರಲ್ಲಿ ಕಾಮಗಾರಿಗೆ ಚಾಲನೆ ನೀಡಿ, ₹87 ಕೋಟಿ ವೆಚ್ಚ ನಿಗದಿ ಮಾಡಲಾಗಿತ್ತು. ನಂತರ ಕಟ್ಟಡ ಕಾಮಗಾರಿಗೆ ಸುಮಾರು ₹78 ಕೋಟಿ, ವಾಹನ, ಪ್ರಯೋಗಾಲಯ, ಸಾಮಗ್ರಿಗಳು ಹಾಗೂ ಪೀಠೋಪಕರಣ ಸೇರಿದಂತೆ ಇನ್ನುಳಿದ ಅವಶ್ಯಕತೆಗಳಿಗೆ ವೆಚ್ಚ ಹೆಚ್ಚಾಯಿತು. ನಂತರ ಯಾವುದೇ ಅನುದಾನ ಬಾರದೆ ನಾಲ್ಕು ವರ್ಷಗಳ ಕಾಲ ನನೆಗುದಿಗೆ ಬಿದ್ದಿತು. ಮತ್ತೆ 2019ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಇತರ ಅಭಿವೃದ್ಧಿ ಕಾಮಗಾರಿಗೆ ₹37 ಕೋಟಿ ಅನುದಾನವನ್ನು ಲಕ್ಷ್ಮಣ ಸವದಿ ಅವರು ಪಡೆದುಕೊಂಡರು.

9 ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಈ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಈಗ ಉದ್ಘಾಟನೆ ಭಾಗ್ಯ ಬಂದಿದ್ದು ತಾಲ್ಲೂಕಿನ ರೈತರಲ್ಲಿ ಸಂತಸ ಮೂಡಿಸಿದೆ.

ರೈತರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಶು ವೈದ್ಯಕೀಯ ಕಾಲೇಜು ಆರಂಭಿಸಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಇದಕ್ಕೆ ಆದ್ಯತೆ ನೀಡಿದ್ದು ಸಮಾಧಾನ ತಂದಿದೆ
ಶಾಸಕ ಲಕ್ಷ್ಮಣ ಸವದಿ ಶಾಸಕ
ಉದ್ಘಾಟನೆ ಆಗಲಿರುವ ಕಾಮಗಾರಿಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಿಗ್ಗೆ ಪಶು ವೈದ್ಯಕೀಯ ಮಹಾವಿದ್ಯಾಲಯ (ಕೊಕಟನೂರ) ಅಥಣಿಯ ಆರ್‌ಟಿಒ ಕಚೇರಿ ಕೆ.ಎಸ್.ಆರ್‌.ಟಿ.ಸಿ ಡಿಪೊ ಕೊಕಟನೂರ ಬಸ್‌ ನಿಲ್ದಾಣ ಸತ್ತಿಮ ಚಿಕ್ಕೂಡ ಮತ್ತು ಇತರೆ ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ಅಡಿಗಲ್ಲು ನೆರವೇರಿಸಲಿದ್ದಾರೆ. ಅಥಣಿ ಪಟ್ಟಣದಲ್ಲಿ ಬಸವಶ್ವರ ಮೂರ್ತಿ ಅನಾವರಣ ತೆಲಸಂಗ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್‌  ವಸತಿ ಶಾಲೆಯ ಕಟ್ಟಡ ಸಿದ್ಧರಾಮೇಶ್ವರ ನೀರಾವರಿ ಯೋಜನೆ ವಾಲ್ಮೀಕಿ ಸಮುದಾಯ ಭವನ ಕಟ್ಟಡ ಉದ್ಗಾಟನೆ ಸಹಕಾರಿ ಪಶು ಗೋ ಸಂಗೋಪನಾ ಶಾಲೆಗಳನ್ನೂ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಮಾಜ ಕಲ್ಯಾಣ ಇಲಾಖೆ ಸಚಿವೆ ಎಚ್.ಸಿ. ಮಹಾದೇವಪ್ಪ ಸೇರಿದಂತೆ ಹಲವು ಸಚಿವರು ಶಾಸಕರು ಸ್ಥಳೀಯ ಜನಪ್ರತಿನಿಧಿಗಳು ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.