ADVERTISEMENT

ರಾಮದುರ್ಗ: ಮರಕ್ಕೆ ಕಟ್ಟಿ ಪರಿಶಿಷ್ಟ ಯುವಕರಿಗೆ ಗುಂಪು ಥಳಿತ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 14:31 IST
Last Updated 11 ಆಗಸ್ಟ್ 2025, 14:31 IST
   

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಐತಿಹಾಸಿಕ ಗೊಡಚಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಇಬ್ಬರು ಯುವಕರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದು, ಒಬ್ಬನ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಹಲ್ಲೆ ಮಾಡಿದ ಲಿಂಗಾಯತ ಸಮಾಜದವರು, ಹಲ್ಲೆಗೊಳಗಾದ ಎಸ್‌ಟಿ ಸಮಾಜದವರು ಪರಸ್ಪರ ದೂರು ದಾಖಲಿಸಿದ್ದಾರೆ.

ಈರಣ್ಣ ವಿಠ್ಠಲ ನಾಯ್ಕರ (18) ಹಾಗೂ ಲಕ್ಷ್ಮಣ ಮಲ್ಲಪ್ಪ ಚಿಪ್ಪಲಕಟ್ಟಿ (19) ಹಲ್ಲೆಗೆ ಒಳಗಾದವರು. ಆಗಸ್ಟ್‌ 5ರಂದು ಹಲ್ಲೆ ನಡೆದಿದ್ದು, ಆ.11ರಂದು ದೂರು ದಾಖಲಿಸಲಾಗಿದೆ. ಲಿಂಗಾಯತ ಸಮಾಜದ ಈರಣ್ಣ ಸಂಗಪ್ಪ ಪಾಕನಟ್ಟಿ, ಬಸನಗೌಡ ನಿಂಗನಗೌಡ ಪಾಟೀಲ, ಪ್ರದೀಪ ಈರಣ್ಣ ಪಾಕನಟ್ಟಿ, ಮಹಾಂತೇಶ ಲಕ್ಷ್ಮಣ ಪಾಕನಟ್ಟಿ, ಸಚಿನ್‌ ದಾನಪ್ಪ ಪಾಕನಟ್ಟಿ, ನಿಂಗರಾಜ ಈರಪ್ಪ ಪಾಕನಟ್ಟಿ, ಸಂಗಪ್ಪ ನಿಂಗಪ್ಪ ಪಾಕನಟ್ಟಿ ಅವರ ವಿರುದ್ಧ ಕೊಲೆ ಯತ್ನ, ಮಾರಣಾಂತಿಕ ಹಲ್ಲೆ ಹಾಗೂ ಜಾತಿ ನಿಂದನೆ ದೂರು ದಾಖಲಿಸಲಾಗಿದೆ.

‘ಆರೋಪಿಗಳು ಹಾಗೂ ನಮ್ಮ ಜಮೀನು ಅಕ್ಕಪಕ್ಕದಲ್ಲಿವೆ. ಜಮೀನಿಗೆ ಹೋಗಲು ದಾರಿ ಏಕೆ ಬಿಡುವುದಿಲ್ಲ ಎಂದು ಜಗಳ ತೆಗೆದ ಆರೋಪಿಗಳು ಯುವಕರನ್ನು ಮರಕ್ಕೆ ಕಟ್ಟಿ ಹೊಡೆದಿದ್ದಾರೆ. ಕುಡಗೋಲು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಕೀಳು ಪದ ಬಳಸಿ ಜಾತಿ ನಿಂದನೆ ಮಾಡಿದ್ದಾರೆ’ ಎಂದು ವಿಠ್ಠಲ ಲಕ್ಷ್ಮಣ ನಾಯ್ಕರ ಎನ್ನುವವರು ದೂರು ನೀಡಿದ್ದಾರೆ.

ADVERTISEMENT

ಇದಕ್ಕೆ ಪ್ರತಿದೂರು ದಾಖಲಿಸಿರುವ ಲಿಂಗಾಯತ ಸಮಾಜದ ವ್ಯಕ್ತಿಯೊಬ್ಬರು, ‘ಈ ಘಟನೆ ಹೊಲಕ್ಕೆ ಸಂಬಂಧಿಸಿಲ್ಲ. ಇಬ್ಬರೂ ಯುವಕರು ನನ್ನ 14 ವರ್ಷದ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಬಾಲಕಿ ಶಾಲೆಗೆ ಹೋಗುವಾಗ– ಬರುವಾಗ ಬೈಕ್‌ ಮೂಲಕ ಬೆನ್ನಟ್ಟಿ ಬರುತ್ತಿದ್ದರು. ಪ್ರೀತಿಸುವಂತೆ ಕಾಡಿಸುತ್ತಿದ್ದರು. ಮೊಬೈಲ್‌ ನಂಬರ್‌ ಕೊಡು, ಇಲ್ಲದಿದ್ದರೆ ಸುಮ್ಮನೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ’ ಎಂದು ದೂರು ನೀಡಿದ್ದಾರೆ.

ಮರಕ್ಕೆ ಕಟ್ಟಿದ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಅದರಲ್ಲಿ ಪರಿಶಿಷ್ಟ ಯುವಕನ ಕಡೆಯ ಕೆಲವು ಹೆಣ್ಣುಮಕ್ಕಳು ಕೂಡ ಯುವಕನಿಗೇ ಬೈದು ಬುದ್ಧಿ ಹೇಳಿದ ಮಾತುಗಳಿವೆ.

‘ಈ ಸಮಾಜದವರು ನಮ್ಮೊಂದಿಗೆ ಚೆನ್ನಾಗಿದ್ದಾರೆ. ಅಕ್ಕ, ತಾಯಿ ಎಂದು ಮಾತನಾಡಿಸುತ್ತಾರೆ. ದಶಕಗಳಿಂದಲೂ ಅವರ ಹೊಲದಲ್ಲಿ ಕೆಲಸ ಮಾಡುತ್ತಿದ್ದೇವೆ. ಯಾವತ್ತೂ ಕೀಳಾಗಿ ಕಂಡಿಲ್ಲ. ಅಂಥವರ ಮನೆಗೆ ನೀನೇಕೆ ಇಂಥ ಕೆಟ್ಟ ಕೆಲಸ ಮಾಡಿದೆ. ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಅರ್ಥ ಮಾಡಿಕೊ’ ಎಂಬ ಮಾತುಗಳೂ ಕೇಳಿಸುತ್ತವೆ.

ಕಟಕೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.