ಬೆಳಗಾವಿ: ತಾಲ್ಲೂಕಿನ ಬಸ್ತವಾಡದಲ್ಲಿ ಬುಧವಾರ ಸುರಿದ ಮಳೆ ಹಾಗೂ ರಭಸವಾಗಿ ಬೀಸಿದ ಗಾಳಿಯಿಂದಾಗಿ, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ತರಗತಿ ಕೊಠಡಿಗಳ ಚಾವಣಿ ಮೇಲೆ ಹಾಕಿದ್ದ ತಗಡಿನ ಶೀಟುಗಳು ಮುರಿದುಬಿದ್ದಿವೆ.
‘ಮಳೆಯಾದರೆ ಕೊಠಡಿಗಳು ಸೋರುತ್ತಿದ್ದವು. ಹಾಗಾಗಿ ನಾಲ್ಕು ಕೊಠಡಿಗಳ ಮೇಲೆ ಎರಡು ವರ್ಷಗಳ ಹಿಂದೆ ತಗಡಿನ ಶೀಟು ಹಾಕಿದ್ದೆವು. ಮಳೆ, ಗಾಳಿಯಿಂದ ಅವು ಹಾರಿಹೋಗಿ, ಮುರಿದು ಬಿದ್ದಿವೆ. ಶಾಲೆ ಹಿಂಭಾಗದಲ್ಲಿ ಅವು ಬಿದ್ದಿದ್ದರಿಂದ ಮಕ್ಕಳಿಗೆ ಯಾವ ತೊಂದರೆಯಾಗಿಲ್ಲ’ ಎಂದು ಎಸ್ಡಿಎಂಸಿ ಅಧ್ಯಕ್ಷ ಶ್ರೇಯಾಂಸ ಕಾಮಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೊಸ ತಗಡಿನ ಶೀಟುಗಳನ್ನು ತಕ್ಷಣವೇ ಅಳವಡಿಸಬೇಕು. ಸುರಕ್ಷತೆಯಿಂದ ಮಕ್ಕಳು ಕಲಿಯಲು ವ್ಯವಸ್ಥೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.
ಚನ್ನಮ್ಮನ ಕಿತ್ತೂರು, ಹುಕ್ಕೇರಿ, ಚಿಕ್ಕೋಡಿ, ಸವದತ್ತಿ ತಾಲ್ಲೂಕಿನ ಮುನವಳ್ಳಿ, ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಬುಧವಾರ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.