ADVERTISEMENT

2ನೇ ದಿನ ಮುಷ್ಕರ: ಬೆಳಗಾವಿಯ ಬಹುತೇಕ ಕಡೆ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 7:20 IST
Last Updated 9 ಜನವರಿ 2019, 7:20 IST
   

ಬೆಳಗಾವಿ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡನೇ ದಿನದ ಮುಷ್ಕರಕ್ಕೆ ಜಿಲ್ಲೆಯ ಬಹುತೇಕ ಕಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ– ಕಾಲೇಜುಗಳು ಆರಂಭವಾಗಿವೆ. ಬಸ್‌, ಆಟೊಗಳು ಸಂಚರಿಸುತ್ತಿವೆ. ಅಂಗಡಿ– ಮುಂಗಟ್ಟುಗಳು ಬಾಗಿಲು ತೆರೆದಿದ್ದು, ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದೆ.

ಬೆಳಗಾವಿ, ರಾಯಬಾಗ, ಗೋಕಾಕದಲ್ಲಿ ಬೆಳಿಗ್ಗೆಯಿಂದಲೇ ಬಸ್‌, ಆಟೊ ಸಂಚರಿಸುತ್ತಿವೆ. ಜನಜೀವನ ಸಾಮಾನ್ಯವಾಗಿದೆ. ಅಥಣಿಯ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆಕಾರರು ರಸ್ತೆ ತಡೆ ನಡೆಸಿದ್ದಾರೆ. ಪರ್ಯಾಯ ಮಾರ್ಗಗಳ ಮೂಲಕ ವಾಹನಗಳು ಸಂಚರಿಸುತ್ತಿವೆ.

ರಾಮದುರ್ಗದಲ್ಲಿ ಬೆಳಿಗ್ಗೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ತಡೆಹಿಡಿಯಲಾಗಿತ್ತು. ಖಾಸಗಿ ಬಸ್‌ಗಳ ಮೂಲಕ ಜನರು ಸಂಚರಿಸಿದರು. ಮಧ್ಯಾಹ್ನದ ನಂತರ ಸಾರಿಗೆ ಸಂಸ್ಥೆಯ ಬಸ್‌ಗಳು ಕೂಡ ಸಂಚಾರ ಆರಂಭಿಸಿದವು.

ADVERTISEMENT

ಸವದತ್ತಿಯಲ್ಲಿ ಬೆಳಿಗ್ಗೆ ಕೆಲವು ಬಸ್‌ಗಳು ಸಂಚಾರ ಆರಂಭಿಸಿದವು. ನಂತರ ಬಾಗಲಕೋಟೆ, ವಿಜಯಪುರ, ಧಾರವಾಡ– ಹುಬ್ಬಳ್ಳಿ ಕಡೆ ಹೊರಟಿದ್ದ ಬಸ್‌ಗಳು ವಾಪಸ್‌ ಬಂದಿವೆ. ಮಧ್ಯಾಹ್ನದ ನಂತರ ಆರಂಭಿಸುವುದಾಗಿ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.