ಬೆಳಗಾವಿ: ‘ದೇಶದಲ್ಲಿ ಬಡವರು ಬದುಕಲೇಬಾರದು ಎಂಬ ಆಶಯವನ್ನು ಬಿಜೆಪಿ ಇಟ್ಟುಕೊಂಡಿದೆ’ ಎಂದು ಕೆಪಿಸಿಸಿ ವಕ್ತಾರೆಯೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಟೀಕಿಸಿದರು.
ಇಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ತಡೆಯುತ್ತಿಲ್ಲ. ಆ ಪಕ್ಷದ ಸಿದ್ಧಾಂತವೇ ಬೇರೆ. ಅಧಿಕಾರ ಹಾಗೂ ಕುರ್ಚಿಯನ್ನು ಹೇಗೆ ಉಳಿಸಿಕೊಳ್ಳಬೇಕು. ಯಾವ ಹಗರಣದಲ್ಲಿ ಎಷ್ಟು ದುಡ್ಡು ಮಾಡಬೇಕು ಎನ್ನುವುದರಲ್ಲೇ ತೊಡಗಿದ್ದಾರೆ’ ಆರೋಪಿಸಿದರು.
‘ಈ ಸರ್ಕಾರಕ್ಕೆ ಬುದ್ಧಿ ಕಲಿಸಲು ಜನರು ನಿರ್ಧರಿಸಿದ್ದಾರೆ’ ಎಂದರು.
‘ಬಿಜೆಪಿಯ ಏಳು ವರ್ಷದ ಆಡಳಿತ ಅವಲೋಕಿಸಿದಾಗ, ವೈಜ್ಞಾನಿಕವಾಗಿ ನಡೆದುಕೊಂಡಿದ್ದು ಕಾಣಿಸುತ್ತಿಲ್ಲ. ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಅಥವಾ ಬುದ್ಧಿವಂತಿಕೆ ಅವರಿಗಿಲ್ಲ’ ಎಂದು ವ್ಯಂಗ್ಯವಾಡಿದರು.
‘ರಾಜ್ಯ ಸರ್ಕಾರ ಜನರ ಆಶೀರ್ವಾದದಿಂದ ರಚನೆಯಾಗಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕುದುರೆ ವ್ಯಾಪಾರದಿಂದ ಬಂದ ಸರ್ಕಾರವಿದು. ಅವರ ಕೋತಿ ಆಟವನ್ನು ಜನರು ನೋಡುತ್ತಿದ್ದಾರೆ’ ಎಂದರು.
‘ದೇಶದಲ್ಲಿ ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಬಿಜೆಪಿಯವರು ಮಾರಿಕೊಂಡು ಹೋಗುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ಬಿಜೆಪಿಯವರು ಚುನಾವಣೆ ಬಂದಾಗ, ರಾಷ್ಟ್ರೀಯತೆ ಮತ್ತು ಹಿಂದುತ್ವದ ಆಧಾರದ ಮೇಲೆ ಜನರ ಬಳಿ ಹೋಗುತ್ತಾರೆ. ಅದೊಂದೇ ಅವರ ಕಾರ್ಯಸೂಚಿ. ಅದಕ್ಕೆ ನಮ್ಮ ವಿರೋಧವಿಲ್ಲ. ನಾವೂ ರಾಮ ಭಕ್ತರೆ. ರಾಮಮಂದಿರ ನಿರ್ಮಾಣಕ್ಕೆ ನಾನೂ ಸೇರಿದಂತೆ ಪಕ್ಷದ ಮುಖಂಡರು ದೇಣಿಗೆ ಕೊಟ್ಟಿದ್ದೇವೆ. ರಾಮಮಂದಿರ ನಿರ್ಮಾಣವನ್ನೇ ಕಾರ್ಯಸೂಚಿ ಮಾಡಿಕೊಳ್ಳಬಾರದು. ಅದೊಂದು ಭಕ್ತಿ ಆಗಬೇಕು. ರಾಮನ ಆದರ್ಶ ಅಳವಡಿಸಿಕೊಂಡು ಸಮಾಜ ಸುಧಾರಣೆ ಮಾಡಬೇಕು’ ಎಂದು ಹೇಳಿದರು.
‘ಪಂಚಮಸಾಲಿ ಸಮಾಜದವರು ಮುಖ್ಯಮಂತ್ರಿಯಾದರೆ ಸಮಾಜಕ್ಕೆ ಅನುಕೂಲ ಆಗುತ್ತದೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.