ಬೆಳಗಾವಿ: ‘ಬಿಜೆಪಿಯ ಸ್ಥಳೀಯ ಘಟಕಗಳ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಫೆ. 26ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಗೋವಾವೇಸ್ ಸಮೀಪದ ಮರಾಠಾ ಮಂದಿರದಲ್ಲಿ ಆಯೋಜಿಸಲಾಗಿದೆ’ ಎಂದು ಪಕ್ಷದ ವಿಭಾಗೀಯ ಪ್ರಭಾರಿ ಈರಣ್ಣ ಕಡಾಡಿ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರ ಘಟಕದ ಅಧ್ಯಕ್ಷರಾಗಿ ಶಶಿಕಾಂತ ಪಾಟೀಲ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಂಜಯ ಪಾಟೀಲ ಅಧಿಕಾರ ಸ್ವೀಕರಿಸುವರು. ಕ್ರಮವಾಗಿ ರಾಜೇಂದ್ರ ಹರಕುಣಿ ಮತ್ತು ಡಾ.ವಿ.ಐ. ಪಾಟೀಲ ಅಧಿಕಾರ ಹಸ್ತಾಂತರಿಸಲಿದ್ದಾರೆ. ನೂತನ ಅಧ್ಯಕ್ಷರ ಅಧಿಕಾರದ ಅವಧಿ ಮೂರು ವರ್ಷಗಳವರೆಗೆ ಇರುತ್ತದೆ’ ಎಂದು ಮಾಹಿತಿ ನೀಡಿದರು.
‘ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಮತ್ತು ಮುಖಂಡರು ಪಾಲ್ಗೊಳ್ಳುವರು, ಅಂದು ಮಧ್ಯಾಹ್ನ 3ಕ್ಕೆ ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಡಾ.ರಾಜೇಶ ನೇರ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆ ಕಾರ್ಯಕ್ರಮದಲ್ಲೂ ರಾಜ್ಯ ಘಟಕದ ಅಧ್ಯಕ್ಷರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.
ಜಿಲ್ಲೆ ವಿಭಜನೆ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಹಿಂದೆ ಸರ್ಕಾರದಿಂದ ರಚಿಸಲಾಗಿದ್ದ ಆಯೋಗಗಳು ಮಾಡಿರುವ ಶಿಫಾರಸಿನಂತೆ ನೂತನ ಜಿಲ್ಲೆಗಳ ರಚನೆಗೆ ನಮ್ಮ ಸಹಮತವೂ ಇದೆ. ಪಕ್ಷದ ವೇದಿಕೆಯಲ್ಲೂ ಈ ಕುರಿತು ಒತ್ತಾಯಿಸಲಾಗುವುದು’ ಎಂದರು.
‘ಮುಂಬರುವ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ತಯಾರಿ ನಡೆಸಿದ್ದೇವೆ. ನಗರಪಾಲಿಕೆ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಮೇಲೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉದ್ದೇಶವಿದೆ. ಪಕ್ಷದ ಬೆಳವಣಿಗೆಗೆ ದುಡಿದವರನ್ನು ನಿಗಮ, ಮಂಡಳಿಗಳಿಗೆ ನೇಮಿಸುವ ಸಂಬಂಧ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಉತ್ತರ ಕ್ಷೇತ್ರದ ಅಧ್ಯಕ್ಷ ಅನಿಲ ಬೆನಕೆ, ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ಮುಖಂಡರಾದ ಸಂಜಯ ಪಾಟೀಲ, ರಾಜೇಂದ್ರ ಹರಕುಣಿ, ಡಾ.ವಿ.ಐ. ಪಾಟೀಲ, ಶಶಿಕಾಂತ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.