
ಚಿಕ್ಕೋಡಿ: ತಾಲ್ಲೂಕಿನ ಬೆಳಕೂಡ ಗ್ರಾಮದ ಮಾರುತಿ ಬಡಿಗೇರ ಅವರ ತೋಟದ ಬಾವಿಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಬುಧವಾರ ಪೊಲೀಸರ ಸಮ್ಮುಖದಲ್ಲಿ ಬೆಳಕೂಡ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
ಡಿ.29ರಂದು ಮೋಟಾರ್ ಚಾಲನೆ ಮಾಡಲು ಹೋಗಿದ್ದ ಮಾರುತಿ ಬಡಿಗೇರ ಅವರು ಹೆಣ್ಣು ಶಿಶುವಿನ ಶವವನ್ನು ಬಾವಿಯಲ್ಲಿ ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶಿಶುವಿನ ಶವ ಹೊರತೆಗೆದು ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಬುಧವಾರ ಶಿಶುವಿನ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕೋಡಿ ಎಎಸ್ಐ ಎಂ ಎಸ್ ಉಗಾರೆ, ಬೆಳಕೂಡ ಗ್ರಾಮಪಂಚಾಯಿತಿ ಪಿಡಿಒ ಅಣ್ಣಪ್ಪ ಇಟ್ನಾಳೆ, ಪೊಲೀಸ್ ಸಿಬ್ಬಂದಿಯಾದ ಆನಂದ ನ್ಯಾಮಗೌಡ, ಭರತ ಲಕ್ಕನ್ನವರ, ಮಹೇಶ ಕೊರವಿ ಇತರರು ಇದ್ದರು. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.