ADVERTISEMENT

‘ಗೀತಾ ಕೃತಿಗಳಲ್ಲಿ ಸಂಸ್ಕೃತಿ, ಜೀವನಶೈಲಿ ಅನಾವರಣ’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 12:56 IST
Last Updated 10 ಫೆಬ್ರುವರಿ 2020, 12:56 IST
ಬೆಳಗಾವಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗೀತಾ ಕುಲಕರ್ಣಿ ಅವರ ‘ಹಿರಿಯರು -ಆತ್ಮೀಯರು’ ಮತ್ತು ‘ಮಲೇಷ್ಯಾ ನೆನಪಿನಲ್ಲಿ’ ಕೃತಿಗಳನ್ನು ಸಾಹಿತಿ ಡಾ.ಬಸವರಾಜ ಜಗಜಂಪಿ ಹಾಗೂ ಗಣ್ಯರು ಬಿಡುಗಡೆ ಮಾಡಿದರು
ಬೆಳಗಾವಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗೀತಾ ಕುಲಕರ್ಣಿ ಅವರ ‘ಹಿರಿಯರು -ಆತ್ಮೀಯರು’ ಮತ್ತು ‘ಮಲೇಷ್ಯಾ ನೆನಪಿನಲ್ಲಿ’ ಕೃತಿಗಳನ್ನು ಸಾಹಿತಿ ಡಾ.ಬಸವರಾಜ ಜಗಜಂಪಿ ಹಾಗೂ ಗಣ್ಯರು ಬಿಡುಗಡೆ ಮಾಡಿದರು   

ಬೆಳಗಾವಿ: ‘ಗೀತಾ ಕುಲಕರ್ಣಿ ಅವರು ಹಿರಿಯ ಸಾಹಿತಿಗಳು ಮತ್ತು ಸಂಗೀತ ವಿದ್ವಾಂಸರ ಆತ್ಮೀಯ ಒಡನಾಟದಲ್ಲಿ ಮಿಂದೆದ್ದವರು. 20 ಮಹಾನುಭಾವರ ಲೇಖನವನ್ನು 30 ವರ್ಷಗಳ ಹಿಂದೆ ಬರೆದಿಟ್ಟಿದ್ದರು. ಅವುಗಳನ್ನು ಮುದ್ರಿಸಿ ಸಾಹಿತ್ಯ ಲೋಕದಲ್ಲಿ ಪರಿಮಳ ಪಸರಿಸಿದ ಮಹಿಳಾ ಸಾಹಿತ್ಯಿಕಾ ಪ್ರಕಟಣಾ ಸಂಸ್ಥೆಯ ಹನುಮಾಕ್ಷಿ ಗೂಗಿ ಅವರ ಕಾರ್ಯ ಶ್ಲಾಘನೀಯ’ ಎಂದು ಸಾಹಿತಿ ಡಾ.ಬಸವರಾಜ ಜಗಜಂಪಿ ಹೇಳಿದರು.

ಜಿಲ್ಲಾ ಲೇಖಕಿಯರ ಸಂಘ, ಉತ್ತರ ಕರ್ನಾಟಕ ಲೇಖಕಿಯರ ಸಂಘ ಮತ್ತು ಮಹಿಳಾ ಸಾಹಿತ್ಯಿಕಾ ಪ್ರಕಟಣಾ ಸಂಸ್ಥೆಗಳ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೀತಾ ಕುಲಕರ್ಣಿ ಅವರ ‘ಹಿರಿಯರು -ಆತ್ಮೀಯರು’ ಮತ್ತು ‘ಮಲೇಷ್ಯಾ ನೆನಪಿನಲ್ಲಿ’ ಕೃತಿಗಳನ್ನು ಸೋಮವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಈ ಕೃತಿಗಳಲ್ಲಿ ಸಂಸ್ಕೃತಿ, ಜೀವನಶೈಲಿ ಅನಾವರಣಗೊಂಡಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕವಿ ಜಿನದತ್ತ ದೇಸಾಯಿ ಮಾತನಾಡಿ, ‘ಗೀತಾ ಕುಲಕರ್ಣಿ ಅವರ ಸಮಗ್ರ ಸಾಹಿತ್ಯದ ಕುರಿತು ವಿಚಾರಸಂಕಿರಣ ಏರ್ಪಡಿಸುವ ಅಗತ್ಯವಿದೆ. ಅವರು ಉತ್ತರ ಕರ್ನಾಟಕದ ಮೊಟ್ಟ ಮೊದಲ ಯಶಸ್ವಿ ಕಾದಂಬರಿಕಾರ್ತಿ. ಅವರ ರಚನೆ ವಿಶ್ವವಿದ್ಯಾಲಯಗಳ ಪಠ್ಯಕ್ಕೆ ಆಯ್ಕೆಯಾಗಿವೆ’ ಎಂದು ಹೇಳಿದರು.

ಸಾಹಿತಿ ಡಾ.ಸರಜೂ ಕಾಟ್ಕರ್‌, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಸಂಕನಗೌಡರ ಮಾತನಾಡಿದರು.

ನಿರ್ಮಲಾ ಬಟ್ಟಲ ಸಂಗಡಿಗರು ನಾಡಗೀತೆ ಹಾಡಿದರು. ಹನುಮಾಕ್ಷಿ ಗೋಗಿ ಸ್ವಾಗತಿಸಿದರು. ಆಶಾ ಯಮಕನಮರಡಿ ಪರಿಚಯಿಸಿದರು. ರೂಪಾ ಜೋಶಿ ನಿರೂಪಿಸಿದರು. ನಂದಾ ಘಾರ್ಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.