ADVERTISEMENT

ಸರ ಕಳವು: 16 ಗಂಟೆಗಳಲ್ಲಿ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 17:51 IST
Last Updated 11 ಏಪ್ರಿಲ್ 2019, 17:51 IST

ಬೆಳಗಾವಿ: ಇಲ್ಲಿನ ಗೋಂಧಳಿ ಗಲ್ಲಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಬಂಗಾರದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ವ್ಯಕ್ತಿಯನ್ನು ಖಡೇಬಜಾರ್‌ ಠಾಣೆ ಪೊಲೀಸರು 16 ಗಂಟೆಗಳಲ್ಲಿ ಬಂಧಿಸಿದ್ದಾರೆ.

ಕಂಗ್ರಾಳ ಗಲ್ಲಿಯ ಯುವರಾಜ ಸರ್ನೋಬತ್ ಆರೋಪಿ. ಆತನಿಂದ 12 ಗ್ರಾಂ. ತೂಕದ ಬಂಗಾರದ ಮಂಗಳಸೂತ್ರ ವಶಪಡಿಸಿಕೊಳ್ಳಲಾಗಿದೆ. ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಸರ ಕಿತ್ತುಕೊಂಡು ಹೋಗಿದ್ದನ್ನು ಆರೋಪಿಯೂ ಒಪ್ಪಿದ್ದಾನೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬುಧವಾರ ರಾತ್ರಿ 9.40ರ ಸಮಯದಲ್ಲಿ ಘಟನೆ ನಡೆದಿದ್ದ ಬಗ್ಗೆ ಸೀಮಾ ಚೌಗಲೆ ದೂರು ನೀಡಿದ್ದರು.

ADVERTISEMENT

ಇನ್‌ಸ್ಪೆಕ್ಟರ್ ಎಂ.ಎಸ್. ಬಳ್ಳಾರಿ ಹಾಗೂ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಮಟ್ಕಾ: ಒಬ್ಬನ ಬಂಧನ
ಬೆಳಗಾವಿ:
ಇಲ್ಲಿನ ಮಾಳಮಾರುತಿ ಠಾಣೆ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕಣಬರಗಿಯ ಮಹೇಶ ನಾಯಕ ಬಂಧಿತ ಆರೋಪಿ. ಆತನಿಂದ ₹ 3,050 ವಶಕ್ಕೆ ಪಡೆಯಲಾಗಿದೆ. ಬುಕ್ಕಿ ಅನಿಲ ರಜಪೂತ ಪರಾರಿಯಾಗಿದ್ದಾನೆ ಎಂದು ‍ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಮಾರಾಟ: ಇಬ್ಬರ ಬಂಧನ
ಬೆಳಗಾವಿ:
ಇಲ್ಲಿನ ಖಾನಾಪುರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಗುರುವಾರ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಉದ್ಯಮಬಾಗ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅನಗೋಳ ಜಟಪಟ ಕಾಲೊನಿಯ ಸಾಗರ ಭಜಂತ್ರಿ ಹಾಗೂ ಸೂರಜ ಪಾಟೀಲ ಬಂಧಿತರು. ಅವರಿಂದ ₹ 2ಸಾವಿರ ಮೌಲ್ಯದ 40 ಗ್ರಾ. ಗಾಂಜಾ, ₹ 600 ನಗದು ಹಾಗೂ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ. ಇನ್ನೊಬ್ಬ ಆರೋಪಿ ರಾಮ್ಯಾ ಅಲಿಯಾಸ್ ರಮೇಶ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.