ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಕೆಲವು ಊರುಗಳಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, ಹೈನುಗಾರಿಕೆ ನಂಬಿದ್ದ ಕುಟುಂಬಗಳ ಆತಂಕಕ್ಕೆ ಕಾರಣವಾಗಿದೆ.
‘ಮೈತುಂಬ ಕಾಣಿಸಿಕೊಳ್ಳುವ ಗಂಟುಗಳ ಯಮಯಾತನೆಯಿಂದ ಹಾಲು ಕರೆಯುವುದನ್ನು ಹಸುಗಳು ಕಡಿಮೆ ಮಾಡುತ್ತ, ಕ್ರಮೇಣ ಸ್ಥಗಿತಗೊಳಿಸುತ್ತವೆ. ಅವುಗಳ ಪರಿಸ್ಥಿತಿ ನೋಡಿದರೆ ಕರುಳು ಹಿಂಡಿದಂತಾಗುತ್ತದೆ’ ಎನ್ನುತ್ತಾರೆ ರೈತರು.
‘ಪಶು ವೈದ್ಯರು ಸೂಚಿಸುವ ಉಪಚಾರ ಮಾಡಿದರೂ ರೋಗ ಬೇಗ ಹತೋಟಿಗೆ ಬರುವುದಿಲ್ಲ. ಮಗುವಿನಂತೆ ಸಾಕಿದ ಹಸು ಗುಣಪಡಿಸಿಕೊಳ್ಳಬೇಕೆಂದರೆ ಸಾವಿರಾರು ರೂಪಾಯಿ ದುಡ್ಡು ವೆಚ್ಚ ಮಾಡಬೇಕಿದೆ’ ಎಂಬುದು ಅವರ ನೋವು.
ಹಿಂಡುವುದು ಸ್ಥಗಿತ
‘ಕರು ಹಾಕಿದ ನಂತರ ಹಸುವಿನ ಮೈಮೇಲೆ ಅಲ್ಲಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿತು. ಇದು ಉಲ್ಭಣಗೊಳ್ಳುತ್ತಲೆ ಹೋಯಿತು. ಮೇವು ತಿನ್ನುವುದನ್ನು ಬಿಟ್ಟಿತು. ಹಾಲು ಕರೆಯುವುದನ್ನೂ ನಿಲ್ಲಿಸಿತು. ಆಕಳು ಸತ್ತೇ ಹೋಯಿತು ಎಂದು ಭಾವಿಸಿದ್ದೆವು. ಕೊನೆಗೂ ಹಸುವನ್ನು ಬದುಕಿಸಿಕೊಂಡೆವು’ ಎಂದು ತಿಗಡೊಳ್ಳಿ ರೈತ ಸಚಿನ್ ಕ್ಯಾತನವರ ತಮ್ಮ ನೋವಿನ ಅನುಭವವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡು ನಿಟ್ಟುಸಿರು ಬಿಟ್ಟರು.
‘ಗಂಟುಗಳು ಒಡೆದು ಸೋರಲು ಪ್ರಾರಂಭಿಸಿದ್ದರಿಂದ ದುರ್ವಾಸನೆಯೂ ಬೀರಲು ಪ್ರಾರಂಭಿಸಿತು. ಅಲ್ಲಲ್ಲಿ ಚರ್ಮ ಸುಲಿದು ಜೋತು ಬಿತ್ತು. ಪಶು ವೈದ್ಯರು ನೀಡಿದ ಔಷಧದಿಂದ ಗುದ ದ್ವಾರದಲ್ಲಿ ರಕ್ತ ಬೀಳಲು ಆರಂಭಿಸಿತು. ಮನೆಯಲ್ಲಿಯೇ ತೆಂಗಿನಕಾಯಿ ಬಳಸಿ ಔಷಧೋಪಚಾರ ಮಾಡಲಾಯಿತು. ಕೆಲ ದಿನಗಳಾದ ನಂತರ ರೋಗ ಹತೋಟಿಗೆ ಬಂತು. ನಿಧಾನವಾಗಿ ಮೇವು ಮೆಲುಕು ಹಾಕುವಂತಾಯಿತು’ ಎಂದು ಪರಿಸ್ಥಿತಿ ವಿವರಿಸಿದರು.
‘ಊರಲ್ಲಿಯ ಕೆಲವು ದನಗಳಿಗೆ ಈ ರೋಗ ಕಾಣಿಸಿಕೊಂಡಿದೆ. ಅವುಗಳಿಗೆ ಪಶು ಚಿಕಿತ್ಸಕರು ಉಪಚಾರ ಮಾಡುತ್ತಿದ್ದಾರೆ. ಮೆಲ್ಲಗೆ ಆವರಿಸಿಕೊಳ್ಳುತ್ತಿರುವ ಈ ರೋಗ ನಿಯಂತ್ರಣಕ್ಕೆ ಪಶು ಪಾಲನಾ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಸಹಸ್ರಾರು ರೂಪಾಯಿ ಕೊಟ್ಟು ಖರೀದಿಸಿರುವ ಜಾನುವಾರಗಳ ಸಾವು ತಡೆಯಲು ಸಮರೋಪಾದಿಯಲ್ಲಿ ಕೆಲಸ ನಡೆಯುವಂತಾಗಬೇಕು’ ಎನ್ನುತ್ತಾರೆ ರೈತರು.
ಬೇರೆ ಕಡೆಯಿಂದ ಖರೀದಿಸಿಕೊಂಡ ಬಂದ ಕೆಲವು ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಸಿಕೊಂಡಿತ್ತು. ಇಲಾಖೆಯಿಂದ ಉಪಚಾರ ಮಾಡಲಾಗಿದ್ದು ಹತೋಟಿಗೆ ಬಂದಿದೆಅಡಿವೆಪ್ಪ ಜ್ಯೋತಿ ಹಿರಿಯ ಪಶು ವೈದ್ಯಕೀಯ ನಿರೀಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.