ಬೆಳಗಾವಿ: ಇಲ್ಲಿನ ನೆಹರೂ ನಗರದಲ್ಲಿ ಪ್ರಗತಿಯಲ್ಲಿರುವ ಕಟ್ಟಡದ ಕಾಮಗಾರಿ ವೇಳೆ ಗೋಡೆ ಕುಸಿದು ಬಿದ್ದು ಬಾಲ ಕಾರ್ಮಿಕ ಮೃತಪಟ್ಟ ಘಟನೆ ಗುರುವಾರ ನಡೆದಿದ್ದು, ಮಾಲೀಕ ಹಾಗೂ ಬಿಲ್ಡರ್ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಕಾಕತಿಯ ಸೋನಟ್ಟಿಯ ಪುನೀತ್ ರಾಮಪ್ಪ ಸುತಗಟ್ಟಿ (16) ಮೃತ. ಕಾರ್ಮಿಕ ಇಲಾಖೆ ಅಧಿಕಾರಿಗಳು ನೀಡಿರುವ ದೂರಿನ ಮೇರೆಗೆ ಕಟ್ಟಡದ ಮಾಲೀಕ ಸದಾಶಿವನಗರದ ಇಮ್ರಾನ್ ಕಿಲ್ಲೇದಾರ ಮತ್ತು ಶಿವಬಸವನಗರದ ಮಜರ್ ಜಮೀಲ್ಅಹಮದ್ ನೇಸರಿ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದೆ. ‘ಬಾಲಕಾರ್ಮಿಕನನ್ನು ಕೆಲಸಕ್ಕೆ ಹಚ್ಚಿರುವುದು, ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿರುವುದು, ಘಟನೆ ಬಗ್ಗೆ ಸಾಕ್ಷ್ಯ ನಾಶಪಡಿಸಿ, ಸಂಬಂಧಿಸಿದ ಪ್ರಾಧಿಕಾರಕ್ಕೆ ತಿಳಿಸದೆ, ಶವಪರೀಕ್ಷೆ ನಡೆಸದೆ ಅಂತ್ಯಸಂಸ್ಕಾರ ನೆರವೇರಿಸಿರುವ ಆರೋಪ ಅವರ ಮೇಲಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಾಂಜಾ ವಶ: ಆರೋಪಿ ಬಂಧನ
ರಾಯಬಾಗ: ತಾಲ್ಲೂಕಿನ ಹಿಡಕಲ್ ಗ್ರಾಮದಲ್ಲಿ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಹಾರೂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭೀಮಪ್ಪ ಅಪ್ಪಣ್ಣ ಬೆಳಗಲಿ ಆರೋಪಿ. ಅವರಿಂದ ₹ 75,990 ಮೌಲ್ಯದ 122 ಕೆ.ಜಿ. ತೂಕದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಎಸ್ಐ ಯಮನಪ್ಪ ಮಾಂಗ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಕುಮಾರ ಪವಾರ, ಆರ್.ಬಿ. ನಾಯಕ, ರಾಜು ಕಟಿಕೆರೆ, ಪಿ.ಕೆ. ಡೋಣಿ, ದೀಪಕ ಕಾಂಬಳೆ, ಎಚ್.ಎನ್. ಮೋಮಿನ, ಹಣಮಂತ ಅಂಬಿ, ಶಿವಾನಂದ ಬಡಿಗೇರ, ಸದಾಶಿವ ಪಾಟೀಲ, ಶ್ರೀಧರ ಬಾಂಗಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.