ಬೆಳಗಾವಿ: ಇಲ್ಲಿನ ಶಹಾಪುರದ ಸರ್ಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ‘ಆಜಾದಿ ಕಾ ಅಮೃತ ಮಹೋತ್ಸವ’ ಅಂಗವಾಗಿ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ಆವರಣದಲ್ಲಿ ಶ್ರಮದಾನ ಮಾಡಿದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಿದರು.
ನಂತರ ಪ್ಲಾಸ್ಟಿಕ್ ಮತ್ತು ಇ–ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಡಿಡಿಪಿಯು ವಿ. ನಾಗರಾಜ ಚಾಲನೆ ನೀಡಿದರು. ಕಾಲೇಜಿನ ಪ್ರಾಚಾರ್ಯ ಬಿ.ವೈ. ಹನೂರು ಹಾಗೂ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಾಗರಾಜ ಮರೆಣ್ಣವರ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಅನುಸೂಯಾ ವಿ. ಹಿರೇಮಠ ಮತ್ತು ಉಪನ್ಯಾಸಕರು ಪಾಲ್ಗೊಂಡಿದ್ದರು. ಮನೆಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದರೆ ಇಡೀ ದೇಶವೆ ಪ್ಲಾಸ್ಟಿಕ್ ಮುಕ್ತವಾಗುತ್ತದೆ ಎಂಬ ಸಂದೇಶ ನೀಡಿದರು.
ನಂತರ ಪ್ಲಾಸ್ಟಿಕ್ ಮುಕ್ತ ಭಾರತ- ಸ್ವಚ್ಛ ಭಾರತ ಕಾರ್ಯಕ್ರಮ ನಡೆಯಿತು. ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸುವ ಕುರಿತು ನಾಗರಾಜ ಮರೆಣ್ಣವರ ಉಪನ್ಯಾಸ ನೀಡಿದರು. ಲಯನ್ಸ್ ಕ್ಲಬ್ ವಲಯದ ಮುಖ್ಯಸ್ಥರು ಸತೀಶ ಪಾಟೀಲ ಅವರು ಕಾಲೇಜಿನ ಎನ್ಎಸ್ಎಸ್ ಘಟಕಕ್ಕೆ 20 ಮರುಬಳಕೆ ಮಾಡಬಹುದಾದ ಕೈಗವಸಗಳನ್ನು ಉಚಿತವಾಗಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.