ADVERTISEMENT

‘ನಾನು ಸಿ.ಎಂ ಯಡಿಯೂರಪ್ಪ ಗೊತ್ತು ತಾನೇ?...’

ಹಣ ಬಿಡುಗಡೆ– ಶಾಶ್ವತ ಪರಿಹಾರ ಯಾವಾಗ ಎಂದು ಪ್ರಶ್ನಿಸಿದ ಯುವತಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 8:43 IST
Last Updated 9 ಆಗಸ್ಟ್ 2019, 8:43 IST
ಸಂಕೇಶ್ವರದ ಪರಿಹಾರ ಕೇಂದ್ರಕ್ಕೆ ಗುರುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭೇಟಿ ನೀಡಿ, ಅಲ್ಲಿನ ಸಂತ್ರಸ್ತರ ಜತೆ ಮಾತನಾಡಿದರು
ಸಂಕೇಶ್ವರದ ಪರಿಹಾರ ಕೇಂದ್ರಕ್ಕೆ ಗುರುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭೇಟಿ ನೀಡಿ, ಅಲ್ಲಿನ ಸಂತ್ರಸ್ತರ ಜತೆ ಮಾತನಾಡಿದರು   

ಚಿಕ್ಕೋಡಿ:‘ನಾನು ಸಿ.ಎಂ ಯಡಿಯೂರಪ್ಪ ಗೊತ್ತು ತಾನೇ? ಪ್ರಧಾನಿ ನರೇಂದ್ರ ಮೋದಿ ಅವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ’ ಎಂದು ಸ್ವತಃ ಮುಖ್ಯಮಂತ್ರಿಯವರು ನೆರೆ ಸಂತ್ರಸ್ತರಿಗೆ ಪರಿಚಯ ಮಾಡಿಕೊಂಡರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನೆರೆ ಸಂತ್ರಸ್ತರು ಯಡಿಯೂರಪ್ಪ ಅವರನ್ನು ಭೇಟಿಯಾಗಲು ಬಂದಿದ್ದರು. ಅಲ್ಲಿ ಸೇರಿದ್ದ ಅಧಿಕಾರಿಗಳು, ಪೊಲೀಸರು ಹಾಗೂ ಜನಪ್ರತಿನಿಧಿಗಳನ್ನು ಕಂಡ ಅವರು ಮಾತನಾಡಿಸಲು ಹಿಂದೇಟು ಹಾಕಿದರು. ಇದನ್ನು ನೋಡಿದ ಯಡಿಯೂರಪ್ಪ ಅವರೇ ಸ್ವತಃ ಮುಂದೆ ಬಂದು, ತಮ್ಮ ಪರಿಚಯ ಮಾಡಿಕೊಂಡು, ಮಾತನಾಡಿಸಿದರು.

‘ನೆರೆಯಿಂದ ಉಂಟಾಗಿರುವ ಹಾನಿಯನ್ನು ನೋಡಲು ಬಂದಿದ್ದೇನೆ. ಮಳೆ ನಿಂತ ತಕ್ಷಣ ಪರಿಹಾರ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಇದಕ್ಕೂ ಮೊದಲು ಅವರು ಬೆಳಗಾವಿ, ಸಂಕೇಶ್ವರ, ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಳಲು ಆಲಿಸಿದರು.

‘ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದೇವೆ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಡುತ್ತೇವೆ. ಅವರು ಬಯಸಿದರೆ, ನದಿ ತೀರದ ಸ್ಥಳ ಬಿಟ್ಟು ಬೇರೆಡೆ ಮನೆ ನಿರ್ಮಿಸಿಕೊಡುತ್ತೇವೆ’ ಎಂದರು.

ಸಂಕೇಶ್ವರದಲ್ಲಿ ಸಿ.ಎ ಓದುತ್ತಿರುವ ವಿದ್ಯಾರ್ಥಿನಿ ಸೀಮಾ ಇಂಗಳಿ ಅವರು, ‘ಪ್ರವಾಹದಲ್ಲಿ ನನ್ನ ಪುಸ್ತಕಗಳು, ಲ್ಯಾಪ್‌ಟಾಪ್‌ ಕೊಚ್ಚಿಕೊಂಡು ಹೋಗಿವೆ. ಕೊಡಿಸಿಕೊಡಿ’ ಎಂದು ಕೋರಿದರು. ತಕ್ಷಣ ವ್ಯವಸ್ಥೆ ಮಾಡುವಂತೆ ಅಲ್ಲಿಯೇ ಇದ್ದ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.