ADVERTISEMENT

ದಕ್ಷಿಣ ಮತಕ್ಷೇತ್ರದಲ್ಲಿ ಸಂಚಾರ ಮುಂದುವರಿಸಿದ ಶಾಸಕ

ನೇಕಾರರ ಕುಟುಂಬದವರಿಗೆ ಸತೀಶ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 16:29 IST
Last Updated 21 ನವೆಂಬರ್ 2021, 16:29 IST
   

ಬೆಳಗಾವಿ: ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ದಕ್ಷಿಣ ಮತಕ್ಷೇತ್ರದ ವಡಗಾವಿಯ ಇಬ್ಬರು ನೇಕಾರರ ಕುಟುಂಬದವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಭಾನುವಾರ ಭೇಟಿಯಾಗಿ ಸ್ವಾಂತನ ಹೇಳಿದರು.

ಪಾಂಡು ಉಪರಿ ಹಾಗೂ ಗಣಪತಿ ಬುಚಡಿ ಎನ್ನುವವರು ಈಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಕುಟುಂಬ ಭೇಟಿಯಾದ ಸತೀಶ, ‘ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು. ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಗತ್ಯ ಸಹಕಾರ ನೀಡಲು ನಾವು ಸಿದ್ಧವಿದ್ದೇವೆ. ಸರ್ಕಾರದಿಂದ ಪರಿಹಾರ ಹಾಗೂ ಸೌಲಭ್ಯ ಕಲ್ಪಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.

‘ಶಾಸಕರು, ನಗರಪಾಲಿಕೆ ಸದಸ್ಯರು ನಮ್ಮ ಕಷ್ಟಗಳಿಗೆ ಸ್ಪಂದಿಸುವುದಿಲ್ಲ. ಇಲ್ಲಿವರೆಗೂ ಪರಿಹಾರ ಕೊಡಿಸಿಲ್ಲ. ಕೋವಿಡ್ ಹಾಗೂ ಮಳೆಯಿಂದ ಸಾಕಷ್ಟು ಸಮಸ್ಯೆಗಳಾಗಿವೆ. ಸಾಲ ಮಾಡಿ ನೇಕಾರಿಕೆಯಲ್ಲಿ ತೊಡಗಿದ್ದವರು ನಷ್ಟದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮೂರು ತಿಂಗಳವರೆಗೆ ಆಹಾರವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾದರೂ ಯಾರೊಬ್ಬರೂ ಸಹಕಾರ ನೀಡಲಿಲ್ಲ’ ಎಂದು ದೂರಿ ಅಳಲು ತೋಡಿಕೊಂಡರು.

ADVERTISEMENT

ಬಳಿಕ ಸತೀಶ ಬಡಾವಣೆಯಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿದರು. ‘ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ಮುಖಂಡರಾದ ಪರಶುರಾಮ, ಪ್ರದೀಪ ಎಂ.ಜಿ., ರಾಘು ಬೋವಿ, ಸರಳಾ ಸಾತ್ಪುತೆ ಇದ್ದರು.

ಸತೀಶ, ಅ.8ರಂದು ದಕ್ಷಿಣ ಕ್ಷೇತ್ರದಲ್ಲಿ ಸಂಚರಿಸಿ ಸಾರ್ವಜನಿಕರ ಅಹವಾಲು ಆಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.