ADVERTISEMENT

ಸಿದ್ದರಾಮಯ್ಯ ವೈಚಾರಿಕವಾಗಿ ಕಲಬೆರಕೆಯಾಗಿದ್ದಾರೆ: ಸಿ.ಟಿ. ರವಿ ಟೀಕೆ

ಕಾಂಗ್ರೆಸ್‌ ನಾಯಕತ್ವ ದೇಶದ ಎಲ್ಲೆ ದಾಟಿ ಕ್ರಾಸ್ ಬೀಡ್ ಆಗಿದೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 10:24 IST
Last Updated 5 ಡಿಸೆಂಬರ್ 2020, 10:24 IST
ಸಿ.ಟಿ. ರವಿ
ಸಿ.ಟಿ. ರವಿ   

ಬೆಳಗಾವಿ: ‘ಕಾಂಗ್ರೆಸ್‌ ನಾಯಕತ್ವ ದೇಶದ ಎಲ್ಲೆ ದಾಟಿ ಕ್ರಾಸ್ ಬೀಡ್ ಆಗಿದೆ. ಹೀಗಾಗಿಯೇ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದರು.

ಇಲ್ಲಿ ಶನಿವಾರ ‍ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಇತ್ತೀಚೆಗೆ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ಗೋ ಹತ್ಯೆ ತಡೆಯಲು ನಾವು ಮುಂದಾಗಿದ್ದೇವೆ. ಆದರೆ, ಮುದಿ ಎತ್ತುಗಳನ್ನು ಇಟ್ಟುಕೊಂಡು ಏನು ಮಾಡುತ್ತಾರೆ ಎಂದು ಸಿದ್ದರಾಮಯ್ಯ ಕೇಳುತ್ತಾರೆ. ನಮ್ಮ ರೈತರು ಭಾವನೆಗಳೊಂದಿಗೆ ಬದುಕುತ್ತಾರೆ. ಗೋವುಗಳು ಮುದಿಯಾದವೆಂದು ಮಾರಲು ಹೋಗುವುದಿಲ್ಲ’ ಎಂದು ತಿರುಗೇಟು ನೀಡಿದರು.

‘ಕ್ರಾಸ್ ಬ್ರೀಡ್‌ನಲ್ಲಿ 2 ವಿಧಗಳಿವೆ. ಒಂದು ಡಿಎನ್‌ಎ ಮತ್ತೊಂದು ಐಡಿಯಾಲಾಜಿ ಕ್ರಾಸ್ ಬ್ರೀಡ್. ತಮ್ಮ ಸಂಸ್ಕೃತಿ, ಪರಂಪರೆ, ಹಿರಿಯರು ಬದುಕಿದ್ದ ರೀತಿ ಎಲ್ಲವನ್ನೂ ಮರೆಯುವುದು ವೈಚಾರಿಕ ಕ್ರಾಸ್ ಬ್ರೀಡ್ ಆಗುತ್ತದೆ. ನನಗಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಮನೆತನದವರು ಗೋ ಸೇವೆ ಮಾಡಿದವರೇ ಹೊರತು, ಗೋ ಹತ್ಯೆ ಸಮರ್ಥಿಸಿದವರಲ್ಲ. ಆದರೆ, ಸಿದ್ದರಾಮಯ್ಯ ಗೋ ಹತ್ಯೆ ಸಮರ್ಥಿಸುತ್ತಿದ್ದಾರೆ. ವೈಚಾರಿಕವಾಗಿ ಕಲಬೆರಕೆ ಆದಾಗ, ಇಂತಹ ಎಡಬಿಡಂಗಿ ಪರಿಸ್ಥಿತಿ ಆಗುತ್ತದೆ. ಅವರು ವೈಚಾರಿಕವಾಗಿ ಕಲಬೆರಕೆಯಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಗೋ ಹತ್ಯೆ ನಿಷೇಧವನ್ನು ನಾವಲ್ಲದೆ ಮತ್ಯಾರು ಮಾಡುತ್ತಾರೆ? ನಮ್ಮ ಪಕ್ಷದ ಬದ್ಧತೆ ಅದು. ರಾಮಮಂದಿರ ಕಟ್ಟುತ್ತಾರಾ ಎನ್ನುತ್ತಿದ್ದರು. ಈಗ, ಪ್ರಾರಂಭವಾಗಿಲ್ಲವೇ? ಹೀಗೆ, ನಮ್ಮ ಪಕ್ಷ ಕೊಟ್ಟ ಮಾತಿಗೆ ತಪ್ಪಿ ನಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಕೂಡ ಬರಬಹುದು’ ಎಂದರು.

‘ನಮ್ಮದು ರಾಷ್ಟ್ರವಾದಿ ಪಕ್ಷ. ದೇಶ ಬಲಪಡಿಸಲು ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ. ಯಾರೇ ಬಂದರೂ ಅವರು ನಮ್ಮವರೇ’ ಎಂದು ಹೇಳಿದರು.

‘ಕಾಂಗ್ರೆಸ್ ಸುಡುವ ಪಕ್ಷ ಅದರ ಬಳಿಗೆ ಯಾರೂ ಹೋಗಬೇಡಿ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದರು. ಈ ವಿಷಯವನ್ನು ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಇನ್ನಾದರೂ ಅರಿಯಲಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.