ADVERTISEMENT

ಕೌಶಲ ವೃದ್ಧಿ: ವೈದ್ಯರಿಗೆ ಸಲಹೆ

ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 13:06 IST
Last Updated 10 ಏಪ್ರಿಲ್ 2022, 13:06 IST
ಬೆಳಗಾವಿಯ ಜೆಎನ್‌ಎಂಸಿ ವಿಜ್ಞಾನ ಸಮಾಜದ 40ನೇ ವಾರ್ಷಿಕ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಭಾರತೀಯ ಸರ್ಜನ್‌ಗಳ ಸಂಘದ ಅಧ್ಯಕ್ಷ ಡಾ.ಜಿ. ಸಿದ್ದೇಶ್ ಉದ್ಘಾಟಿಸಿದರು
ಬೆಳಗಾವಿಯ ಜೆಎನ್‌ಎಂಸಿ ವಿಜ್ಞಾನ ಸಮಾಜದ 40ನೇ ವಾರ್ಷಿಕ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಭಾರತೀಯ ಸರ್ಜನ್‌ಗಳ ಸಂಘದ ಅಧ್ಯಕ್ಷ ಡಾ.ಜಿ. ಸಿದ್ದೇಶ್ ಉದ್ಘಾಟಿಸಿದರು   

ಬೆಳಗಾವಿ: ‘ವೈದ್ಯಕೀಯ ವಿದ್ಯಾರ್ಥಿಗಳು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನೂತನ ಸಂಶೋಧನೆಗಳ ತಾಜಾ ಮಾಹಿತಿಯನ್ನು ಹೊಂದಬೇಕು. ಇದರೊಂದಿಗೆ ಕೌಶಲವನ್ನೂ ವೃದ್ಧಿಪಡಿಸಿಕೊಳ್ಳಬೇಕು’ ಎಂದು ಭಾರತೀಯ ಸರ್ಜನ್‌ಗಳ ಸಂಘದ ಅಧ್ಯಕ್ಷ ಡಾ.ಜಿ. ಸಿದ್ದೇಶ್ ತಿಳಿಸಿದರು.

ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಜವಾಹರಲಾಲ್‌ ನೆಹರೂ ವೈದ್ಯಕೀಯ ಮಹಾವಿದ್ಯಾಲಯ, ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ನೆಹರೂ ನಗರ ಜೆಎನ್‌ಎಂಸಿ ಸಭಾಂಗಣದಲ್ಲಿ ಶನಿವಾರ ನಡೆದ ಜೆಎನ್‌ಎಂಸಿ ವಿಜ್ಞಾನ ಸಮಾಜದ 40ನೇ ವಾರ್ಷಿಕ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವೈದ್ಯರು ರೋಗಿಗಳೊಂದಿಗೆ ನೇರ ಸಂಪರ್ಕದಲ್ಲಿರಬೇಕು. ಇದರಿಂದ ಉತ್ತಮ ಚಿಕಿತ್ಸೆ ನೀಡಬಹುದಾಗಿದೆ’ ಎಂದರು.

ADVERTISEMENT

‘ಆಧುನಿಕ ವೈದ್ಯ ವಿಜ್ಞಾನ ಕೋರ್ಸ್‌ಗೆ ಯುವತಿಯರು ಹೆಚ್ಚಾಗಿ ಸೇರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಚೇತರಿಸಿಕೊಂಡ ನಂತರ ರೋಗಿಯ ನಗುವನ್ನು ನೋಡುವುದು ಸರ್ಜನ್‌ಗಳಿಗೆ ತೃಪ್ತಿದಾಯಕ ಭಾವ ನೀಡುತ್ತದೆ’ ಎಂದು ನುಡಿದರು.

‘ಶ್ರಮವಿಲ್ಲದ ಜೀವನಶೈಲಿಯಿಂದಾಗಿ ಹಲವು ರೋಗಗಳು ವಿಶೇಷವಾಗಿ ಕ್ಯಾನ್ಸರ್ ಹೆಚ್ಚುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ವಿವೇಕ್ ಸಾವೋಜಿ ಮಾತನಾಡಿ, ‘ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಜ್ಞಾನ ವೃದ್ಧಿಸಿಕೊಳ್ಳಬೇಕು. ಶಸ್ತ್ರಚಿಕಿತ್ಸಾ ಕೌಶಲಗಳನ್ನು ಪಡೆದುಕೊಳ್ಳಬೇಕು. ರೋಗಿಗಳಿಗೆ ಉತ್ತಮ ಆರೈಕೆ ನೀಡಲು ವೈದ್ಯರು ಜ್ಞಾನ ಹಂಚಿಕೊಳ್ಳುವ ಕಾರ್ಯದಲ್ಲಿ ನಿಯಮಿತವಾಗಿ ಭಾಗವಹಿಸಬೇಕು’ ಎಂದು ತಿಳಿಸಿದರು.

ಆಸ್ಪತ್ರೆಯ ಸ್ತ್ರೀ ರೋಗ ಮತ್ತು ಹೆರಿಗೆ ವಿಭಾಗವು ಅತ್ಯಂತ ಸಂಕೀರ್ಣ ಮತ್ತು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸುತ್ತಿರುವುದರಿಂದ ಅತ್ಯುತ್ತಮ ವಿಭಾಗವಾಗಿ ಹೊರಹೊಮ್ಮಿದ್ದು, ಡಾ.ಅನಿತಾ ದಲಾಲ ಅವರು ಪ್ರಶಸ್ತಿ ಸ್ವೀಕರಿಸಿದರು.

ಕುಲಸಚಿವರಾದ ಡಾ.ವಿ.ಎ. ಕೋಠಿವಾಲೆ, ಜೆಎನ್‌ಎಂಸಿ ಪ್ರಾಂಶುಪಾಲೆ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ ಮಾತನಾಡಿದರು.

ಡಾ.ವಿ.ಡಿ. ಪಾಟೀಲ, ಡಾ.ಎಂ.ವಿ. ಜಾಲಿ, ಡಾ.ವಿ.ಎಂ. ಪಟ್ಟಣಶೆಟ್ಟಿ, ಡಾ.ಸುಮಾ, ಡಾ.ಸಮೀರ್ ಚಾಟೆ, ಡಾ.ರಾಹುಲ್, ಡಾ.ಆರೀಫ್ ಮಾಲ್ದಾರ್ ಪಾಲ್ಗೊಂಡಿದ್ದರು.

ಡಾ.ಶ್ರೀಶೈಲ ಮೆಟಗುಡ್ ಸ್ವಾಗತಿಸಿದರು. ಡಾ.ರಮೇಶ ಕೌಜಲಗಿ ವಂದಿಸಿದರು.

ಗುಣಮಟ್ಟಕ್ಕೆ ಆದ್ಯತೆ ಕೊಡಿ

ವೈದ್ಯರು ಮಾರುಕಟ್ಟೆ ಮತ್ತು ಲಾಭದ ಸೇವೆಗಳಿಗೆ ಗಮನ ನೀಡದೆ ಚಿಕಿತ್ಸೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ಕೊಡಬೇಕು.

–ಡಾ.ಜಿ. ಸಿದ್ದೇಶ್, ಅಧ್ಯಕ್ಷ, ಭಾರತೀಯ ಸರ್ಜನ್‌ಗಳ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.