ಬೆಳಗಾವಿ: ಕೋವಿಡ್–19 ಸೋಂಕು ದೃಢಪಟ್ಟು ಇಲ್ಲಿನ ಕೆಎಲ್ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ದಾಖಲಾಗಿದ್ದ ಇಬ್ಬರು ಗುಣಮುಖರಾಗಿದ್ದು, ಅವರನ್ನು ಬುಧವಾರ ಬಿಡುಗಡೆ ಮಾಡಲಾಯಿತು.
ಅಥಣಿಯ ತಂದೆ (70) ಹಾಗೂ ಪುತ್ರ (30) 7 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಪುಷ್ಪಗಳನ್ನು ನೀಡಿ ಬೀಳ್ಕೊಟ್ಟರು.
ಬಳಿಕ ಮಾತನಾಡಿದ ಕೋರೆ, ‘ಆಸ್ಪತ್ರೆಯಲ್ಲಿ ಕೋವಿಡ್-19 ಎದುರಿಸಲು ಸಕಲ ವ್ಯವಸ್ಥೆಯನ್ನು 3 ತಿಂಗಳ ಹಿಂದಿನಿಂದಲೇ ಮಾಡಿಕೊಳ್ಳಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬರುತ್ತಿಲ್ಲ. ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಇದನ್ನು ಎದುರಿಸಲು ನಾವು ಸರ್ಕಾರದೊಂದಿಗೆ ಕೈಜೋಡಿಸಿದ್ದೇವೆ. ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಇದಕ್ಕಾಗಿಯೇ 40 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಅವುಗಳಲ್ಲಿ 4 ಹಾಸಿಗೆಗಳು ವೆಂಟಿಲೇಟರ್ ಮೊದಲಾದ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಹೊಂದಿವೆ. ತುರ್ತು ಪರಿಸ್ಥಿತಿ ನಿಭಾಯಿಸಲು ಇವು ಅನುಕೂಲವಾಗಲಿವೆ’ ಎಂದು ತಿಳಿಸಿದರು.
‘ಚಿಕಿತ್ಸೆಯಲ್ಲಿ ನ್ಯೂನತೆಗಳು ಎದುರಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇನ್ನೂ 6 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೇಗ ಗುಣಮುಖರಾಗಲಿ’ ಎಂದು ಹಾರೈಸಿದರು.
ಇದಕ್ಕೂ ಮುನ್ನ ಕೋವಿಡ್ ವಾರ್ ರೂಮ್ ಉದ್ಘಾಟಿಸಲಾಯಿತು. ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ಜೆಎನ್ಎಂಸಿ ಪ್ರಾಚಾರ್ಯೆ ಡಾ.ನಿರಂಜನಾ ಮಹಾಂತಶೆಟ್ಟಿ, ಡಾ.ವಿ.ಡಿ. ಪಾಟೀಲ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಮೆಡಿಕಲ್ ಸೂಪರಿಟೆಂಡೆಂಟ್ ಡಾ.ಆರ್.ಎಸ್. ಮುಧೋಳ, ಡಾ.ಎ.ಎಸ್. ಗೋಗಟೆ, ಡಾ.ಮಾಧವಪ್ರಭು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.