ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ದೇವರಡ್ಡೇರಟ್ಟಿ ಗ್ರಾಮದ ರೈತ ಅಪ್ಪಾಸಾಬ ನಾಯಕ ಅವರ ಕೃಷಿಹೊಂಡದ ಬಳಿ ಪತ್ತೆಯಾದ 50ಕ್ಕೂ ಅಧಿಕ ಮೊಸಳೆ ಮರಿಗಳು ಮತ್ತು ಮೊಟ್ಟೆಗಳನ್ನು ರಕ್ಷಿಸಿದ ಗ್ರಾಮಸ್ಥರು, ಸುರಕ್ಷಿತವಾಗಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಅಪ್ಪಾಸಾಬ ಅವರ ಕೃಷಿ ಹೊಂಡದಲ್ಲಿ ಕೆಲ ತಿಂಗಳ ಹಿಂದೆ ದೊಡ್ಡ ಮೊಸಳೆ ಕಾಣಿಸಿತ್ತು. ಪಕ್ಕದಲ್ಲೇ ಅಗ್ರಾಣಿ ಹಳ್ಳ ಹರಿಯುವ ಕಾರಣ, ಅಲ್ಲಿಂದ ಅದು ಬಂದಿರಬಹುದು ಎಂದು ಭಾವಿಸಲಾಗಿತ್ತು. ಆದರೆ, ಕೃಷಿ ಹೊಂಡದಲ್ಲೇ ಠಿಕಾಣಿ ಹೂಡಿದ ಮೊಸಳೆ, ಮೊಟ್ಟೆಗಳನ್ನು ಇಟ್ಟು ಮರಿ ಮಾಡಿದೆ. ಮಂಗಳವಾರ ಒಂದು ಮರಿ ಕಾಣಿಸಿಕೊಂಡಿತ್ತು. ಅನುಮಾನಗೊಂಡ ಗ್ರಾಮಸ್ಥರು ಹೊಲದ ಬದು ಅಗೆದಾಗ 50ಕ್ಕೂ ಅಧಿಕ ಮರಿ ಹಾಗೂ ಮೊಟ್ಟೆಗಳು ಸಿಕ್ಕವು.
‘ಅಗ್ರಾಣಿ ಹಳ್ಳ, ಅಕ್ಕಪಕ್ಕದ ಕೆಲ ಬಾವಿಗಳು ಮತ್ತು ಕೃಷಿ ಜಮೀನಿನಲ್ಲಿ ಆಗಾಗ ಮೊಸಳೆಗಳು ಕಾಣಿಸಿಕೊಳ್ಳುತ್ತವೆ. ಆತಂಕದಿಂದ ಕೃಷಿ ಕೆಲಸ ಮಾಡುವಂತಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣವೇ ಇವುಗಳನ್ನು ಸೆರೆಹಿಡಿಯಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.