ADVERTISEMENT

ಬೆಳಗಾವಿಯಲ್ಲಿ ಕ್ರೂಸರ್ ವಾಹನ ಪಲ್ಟಿ: ಏಳು ಕಾರ್ಮಿಕರು ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 6:43 IST
Last Updated 26 ಜೂನ್ 2022, 6:43 IST
   

ಬೆಳಗಾವಿ: ತಾಲ್ಲೂಕಿನ ಕಳ್ಳಾಳ್ ಬಳಿ ಕ್ರೂಸರ್‌ ಪಲ್ಟಿಯಾಗಿ ಮೃತಪಟ್ಟ ಏಳು ಜನರಲ್ಲಿ ನಾಲ್ವರು ಅಕ್ಕತಂಗೇರಹಾಳ, ಇಬ್ಬರುದಾಸನಟ್ಟಿ ಹಾಗೂ ಇನ್ನೊಬ್ಬರು ಮಲ್ಲಾಪುರ (ಎಸ್‌.ಎ) ಗ್ರಾಮದವರುಎಂದು ಗೊತ್ತಾಗಿದೆ.

ಅಕ್ಕತಂಗೇರಹಾಳಗ್ರಾಮದ ಅಡಿವೆಪ್ಪ ಚಿಲಬಾಂವಿ (27), ಬಸವರಾಜ್ ದಳವಿ (30), ಬಸವರಾಜ ಹನಮನ್ನವರ (51), ಆಕಾಶ ಗಸ್ತಿ (22), ದಾಸನಟ್ಟಿ ಗ್ರಾಮದ ಫಕಿರಪ್ಪ ಹರಿಜನ (55), ಮಲ್ಲಪ್ಪ ದಾಸನಟ್ಟಿ (30), ಮಲ್ಲಾಪುರ (ಎಸ್‌.ಎ) ಗ್ರಾಮದ ಬಸವರಾಜ ಸನದಿ (35) ಮೃತಪಟ್ಟವರು.

ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದ್ದು ಬೆಳಗಾವಿ ಜಿಲ್ಲಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಮೂರು ವಾಹನಗಳಲ್ಲಿ ಹೊರಟಿದ್ದರು:ಈ ಮೂರು ಗ್ರಾಮಗಳ 40ಕ್ಕೂ ಹೆಚ್ಚು ಕಾರ್ಮಿಕರು ಮೂರು ಕ್ರೂಸರ್ ವಾಹನಗಳಲ್ಲಿ ಭಾನುವಾರ ಬೆಳಿಗ್ಗೆ ಕೆಲಸಕ್ಕೆ ಹೊರಟಿದ್ದರು.

ಅದರಲ್ಲಿ ಅಕ್ಕತಂಗೇರಹಾಳ ಗ್ರಾಮದಿಂದ ಹೊರಟ ವಾಹನದಲ್ಲಿ 18 ಜನ ಇದ್ದರು.

ಕೆಲಸಕ್ಕೆ ತಡವಾಗುತ್ತದೆ ಎಂಬ ಕಾರಣಕ್ಕೆ ವಾಹನ ಚಾಲಕರು ವೇಗವಾಗಿ ಓಡಿಸುತ್ತಿದ್ದರು. ಹಿಂದಿನ ಕ್ರೂಸರ್ ರಸ್ತೆಬದಿಯ ತಡೆಗೋಡೆಗೆ ಡಿಕ್ಕಿ ಹೊಡೆಯಿತು. ಆ ಕ್ಷಣದಲ್ಲಿ ಚಾಲಕ ಹೊರಜಿಗಿದು ಪ್ರಾಣ ಉಳಿಸಿಕೊಂಡ. ಚಾಲಕನಿಲ್ಲದೇ ನುಗ್ಗಿದ ವಾಹನ ಎರಡುಬಾರಿ ಪಲ್ಟಿಯಾಯಿತು.

ಇದನ್ನು ಕಂಡು ಮುಂದಿನ ವಾಹನಗಳಲ್ಲಿದ್ದವರು ವಾಹನ ನಿಲ್ಲಿಸಿ ಸ್ಥಳಕ್ಕೆ ಧಾವಿಸಿದರು. ಇದೇ ಮಾರ್ಗದಲ್ಲಿ ಹೊರಟಿದ್ದ ಇತರ ವಾಹನಗಳ ಪ್ರಯಾಣಿಕರೂ ನೆರವಿಗೆ ಧಾವಿಸಿದರು.

ಪಲ್ಟಿ ಹೊಡೆದ ವಾಹನ ಕಾರ್ಮಿಕರ ಮೇಲೆಯೇ ಬಿದ್ದಿದ್ದರಿಂದ ಕೆಲ ಕ್ಷಣಗಳಲ್ಲಿ ಏಳು ಜನ ಪ್ರಾಣತೆತ್ತರು.

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದವರು, ಪ್ರಾಣಬಿಟ್ಟವರನ್ನು ಜನ ಎತ್ತಿಕೊಂಡು ರಸ್ತೆ ಬದಿ ತಂದರು. ಕುಟುಂಬದವರು, ಜೊತೆಗೆ ಕೆಲಸಕ್ಕೆ ಬಂದವರ ಆಕ್ರಂದನ ಮುಗಿಲು ಮುಟ್ಟಿತು.

ಧಾವಿಸಿದ 15 ಆಂಬುಲೆನ್ಸ್:ಅಪಘಾತದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ತಕ್ಷಣಕ್ಕೆ 15 ಆಂಬುಲೆನ್ಸ್ ಹಾಗೂ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದರು.

ಆಂಬುಲೆನ್ಸ್‌ಗಳುಶವಗಳ ಸಮೇತ ಎಲ್ಲರನ್ನೂ ಹೊತ್ತು ಬೆಳಗಾವಿಯತ್ತ ಧಾವಿಸಿದವು.

ಬೆಳಗಾವಿ ನಗರ ಪೊಲೀಸ್ಕಮೀಷನರ್ ಡಾ.ಬೋರಲಿಂಗಯ್ಯ, ಆರ್.ಟಿ.ಒ ಶಿವಾನಂದ ಮಗದುಮ್ ಸ್ಥಳದಲ್ಲಿದ್ದು ಜನ–ವಾಹನ ಸಂಚಾರಕ್ಕೆ ಅನುವು ಮಾಡಿದರು.

ಕಳ್ಳಾಳ್ ಹಾಗೂ ಸುತ್ತಲಿನ ಅಪಾರ ಜನ ಸ್ಥಳದಲ್ಲಿ ಜಮಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.