ಗೋಕಾಕ: ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಜರುಗಿದ ಕುದುರೆ ಗಾಡಿ ಶರ್ಯತ್ತಿನಲ್ಲಿ ಕುದುರೆಗಳ ರೋಮಾಂಚನಕಾರಿ ಓಟ ಹಾಗು ಸೈಕಲ್ ಸ್ಫರ್ಧೆಗಳು ಜನರ ಗಮನ ಸೆಳೆದವು.
ಗೋಕಾಕ ನಾಕಾ ನಂ-1ರಿಂದ ಕುದುರೆ ಗಾಡಿ ಶರ್ಯತ್ತು ಪ್ರಾರಂಭವಾಗಿ ದುಂಡಾನಟ್ಟಿ ಈಶ್ವರಲಿಂಗ ದೇವಸ್ಥಾನಕ್ಕೆ ಹೋಗಿ ಮರಳಿ ಬಂದ ಗೋಕಾಕ ನಗರದ ಕರೆಪ್ಪ ಭಂಡಾರಿ ಇವರ ಕುದುರೆಗಳು ಪ್ರಥಮ ₹ 2 ಲಕ್ಷ ಮತ್ತು ಒಂದು ಸ್ಮರಣಿಕೆ, ಕಿರಣ ರಂಕನಕೊಪ್ಪ ಇವರ ಕುದುರೆಗಳು ದ್ವಿತೀಯ ₹ 1 ಲಕ್ಷ ಹಾಗೂ ಚಿಕ್ಕೋಡಿ ತಾಲ್ಲೂಕಿನ ಉಮರಾಣಿಯ ರಾಜು ಇವರ ಕುದುರೆಗಳು ತೃತೀಯ ₹ 50 ಸಾವಿರ ಬಹುಮಾನ ಪಡೆದುಕೊಂಡರು.
ಸೈಕಲ್ ಸ್ಫರ್ಧೆಯಲ್ಲಿ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದ ಕರೆಪ್ಪ ಕೊಕ್ಕಡಿ ಪ್ರಥಮ ₹1 ಲಕ್ಷ, ಬಾಗಲಕೋಟ ಜಿಲ್ಲೆಯ ಬೀಳಗಿಯ ಅರುಣ ಲಮಾಣಿ ದ್ವಿತೀಯ ₹ 75 ಸಾವಿರ ಮತ್ತು ವಿಜಯಪುರದ ಮಹಮ್ಮದ ಸಾಧನಿ ತೃತೀಯ ₹ 50 ಸಾವಿರ ಹಾಗೂ ಮಹಾರಾಷ್ಟ್ರದ ಕೊಲ್ಹಾಪುರದ ಸಿದ್ದೇಶ ಪಾಟೀಲ ನಾಲ್ಕನೇ ಸ್ಥಾನ ಪಡೆದು ₹ 25 ಸಾವಿರ ಬಹುಮಾನ ಪಡೆದುಕೊಂಡರು.
ಕುದುರೆ ಗಾಡಿ ಶರ್ಯತ್ತು ಮತ್ತು ಸೈಕಲ್ ಸ್ಫರ್ಧೆಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ ನೀಡಿ, ವಿಜೇತರಿಗೆ ನಗದು ಬಹುಮಾನ ವಿತರಿಸಿದರು.
ಯುವ ನಾಯಕ ಅಮರನಾಥ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ನಗರಸಭೆ ಅಧ್ಯಕ್ಷ ಪ್ರಕಾಶ್ ಮುರಾರಿ, ಜಿ.ಪಂ. ಮಾಜಿ ಸದಸ್ಯ ತುಕಾರಾಮ ಕಾಗಲ್, ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಜಾತ್ರಾ ಕಮಿಟಿಯ ಪ್ರಭಾಕರ ಚವ್ಹಾಣ, ಅಡಿವೆಪ್ಪ ಕಿತ್ತೂರ, ಸಗೀರ ಕೋತವಾಲ, ಸಾಗರ ಗುಡ್ಡದಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.