ADVERTISEMENT

ಡಿಸಿಸಿ ಬ್ಯಾಂಕ್: ಅವಿರೋಧ ಆಯ್ಕೆಗೆ ಯತ್ನ- ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ವರಿಷ್ಠರ ಸೂಚನೆ; ಒಗ್ಗಟ್ಟು ಪ್ರದರ್ಶಿಸಿದ ನಾಯಕರು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 13:36 IST
Last Updated 29 ಅಕ್ಟೋಬರ್ 2020, 13:36 IST

ಬೆಳಗಾವಿ: ‘ಪಕ್ಷದ ವರಿಷ್ಠರ ಸೂಚನೆ ಮೇರೆಗೆ, ನಮ್ಮಲ್ಲಿದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮುಖಂಡರೆಲ್ಲರೂ ಒಂದಾಗಿದ್ದೇವೆ. ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಲಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

‘16 ಸ್ಥಾನಗಳಲ್ಲಿ ಈಗಾಗಲೇ 8 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ. ಉಳಿದ ಸ್ಥಾನಗಳಿಗೂ ಅವಿರೋಧ ಆಯ್ಕೆಗಾಗಿ ಉಮೇದುವಾರರ ಮನವೊಲಿಸಲಿದ್ದೇವೆ. ಅದರಲ್ಲಿ ಯಶಸ್ವಿಯಾಗಲಿದ್ದೇವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

‘ಜಿಲ್ಲೆಯ ಅಭಿವೃದ್ಧಿ, ರೈತರ ಹಿತ ಹಾಗೂ ಬ್ಯಾಂಕ್‌ ಒಳಿತಿಗಾಗಿ ಈ ಬಾರಿ ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ ಶೆಟ್ಟರ್‌ ಮತ್ತು ಆರ್‌ಎಸ್‌ಎಸ್‌ ಮುಖಂಡರು ಸೂಚಿಸಿದ್ದರು. ವರಿಷ್ಠರ ನಿರ್ದೇಶನಕ್ಕೆ ಗೌರವ ಕೊಟ್ಟಿದ್ದೇವೆ. ವೈಮನಸ್ಸು ಇರಬಾರದೆಂದು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದವು ನಿಜ. ಆದರೆ, ಈಗಿಲ್ಲ. 20 ವರ್ಷಗಳ ಗುರಿಯೊಂದಿಗೆ, ಎಲ್ಲ ಚುನಾವಣೆಯಲ್ಲೂ ಒಂದಾಗಿ ಹೋಗುತ್ತೇವೆ. ಗೊಂದಲಗಳು ನಿವಾರಣೆಯಾಗಿವೆ’ ಎಂದು ಪ್ರತಿಕ್ರಿಯಿಸಿದರು.

ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ‘ನಾವು ಒಗ್ಗಟ್ಟಾಗಿ ಅವಿರೋಧ ಆಯ್ಕೆ ಮಾಡುವ ಮೂಲಕ ಇಡೀ ರಾಜ್ಯಕ್ಕೆ ಸಂದೇಶ ರವಾನಿಸಲಿದ್ದೇವೆ. ಬ್ಯಾಂಕ್‌ನ ಹಿಂದಿನ ಚುನಾವಣೆಯಲ್ಲಿ ನಮ್ಮ ಸಂಬಂಧಗಳು ಹಾಳಾಗಿದ್ದವು. ಈಗ ಇದೇ ಚುನಾವಣೆಯಿಂದ ಸಂಬಂಧ ಬೆಸೆದಿದೆ. ಹೊಂದಾಣಿಕೆಯಿಂದ ಮುಂದುವರಿಯುತ್ತೇವೆ’ ಎಂದರು.

‘ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ–ಲಕ್ಷ್ಮಣ ಸವದಿ ಶೀಘ್ರವೇ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.