ಅಥಣಿ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಕಡೆಯಿಂದ ಅಥಣಿ ಅಭ್ಯರ್ಥಿಯಾಗಿ ಮಹೇಶ ಕುಮಠಳ್ಳಿ ಹಾಗೂ ಕಾಗವಾಡ ಕ್ಷೇತ್ರದಿಂದ ಶ್ರೀನಿವಾಸ ಪಾಟೀಲ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅಥಣಿ ಪಟ್ಟಣದ ಆರ್.ಎಸ್.ಪಿ ಸಭಾ ಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕನ್ನೇರಿ ಮಠದಲ್ಲಿ ಲಿಂಗಾಯತ ಶಾಸಕರ ಸಭೆ ಮಾಡಿದ ಶಾಸಕ ಲಕ್ಷ್ಮಣ ಸವದಿ ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಜಾರಕಿಹೊಳಿ ಕುಟುಂಬ ಯಾವತ್ತೂ ಲಿಂಗಾಯತರ ವಿರುದ್ಧ ಇಲ್ಲ. ಡಿಸಿಸಿ ಬ್ಯಾಂಕ್ಗೆ ಲಿಂಗಾಯತ ಧರ್ಮದವರೆ ಅಧ್ಯಕ್ಷ ಆಗುತ್ತಾರೆ ಎಂದು ಹೇಳಿದರು.
ಲಕ್ಷ್ಮಣ ಸವದಿ ಒಬ್ಬ ನಾಟಕಕಾರ. 2018ರ ಚುನಾವಣೆಯಲ್ಲಿ ಜನ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು
ಮಹೇಶ ಕುಮಠಳ್ಳಿ ಮಾತನಾಡಿ, ರೈತರ ಅಭಿವೃದ್ಧಿಗಾಗಿ ನಿಸ್ಪಕ್ಷಪಾತವಾಗಿ ಡಿಸಿಸಿ ಬ್ಯಾಂಕ್ ಚುನಾವಣೆ ಮಾಡೋಣಾ ಎಂದು ಹೇಳುವವರೇ ಅಥಣಿಯಲ್ಲಿ ತಮಗೆ ಬೇಕಾದವರಿಗೆ ಮಾತ್ರ ಸಾಲದ ಪತ್ತು ನೀಡುತ್ತಾರೆ. ಇದು ರಾಜಕೀಯ ಅಲ್ವ ಎಂದು ಕಿಡಿಕಾರಿದರು.
2019ರಲ್ಲಿ ರಮೇಶ ಕತ್ತಿ ಹಾಗೂ ಉಮೇಶ ಕತ್ತಿ ಅವರು ನನಗೆ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಿಲ್ಲಿ ಎಂದು ಒತ್ತಡ ಹಾಕಿದರು. ನಂತರ ಅಥಣಿಗೆ ಬಂದು ಲಕ್ಷ್ಮಣ ಸವದಿ ಅವರೊಂದಿಗೆ ಹೊಂದಾಣಿಕೆಯಾದರು. ಈಗ ನಾನು ಚುನಾವಣೆ ಎದುರಿಸಲು ಸಿದ್ದವಾಗಿದ್ದೇನೆ. ಫಲಿತಾಂಶ ಏನೇ ಬರಲಿ ಸ್ಪರ್ಧೆ ಖಚಿತ ಎಂದು ಹೇಳಿದರು.
ಮಾಜಿ ಸಚಿವ ಶ್ರೀಮಂತ ಪಾಟೀಲ, ಮುಖಂಡ ಸಿದ್ದಪ್ಪ ಮುದಕ್ಕಣ್ಣವರ ಮಾತನಾಡಿದರು.
ಬಿಜೆಪಿ ಅದ್ಯಕ್ಷರಾದ ಡಾ.ರವಿ ಸಂಕ, ಉಪಾದ್ಯಕ್ಷರಾದ ಸಿದ್ದು ಪಾಟೀಲ, ಮಲ್ಲಪ್ಪಾ ಹಂಚಿನಾಳ, ಚಿಕ್ಕೋಡಿ ಜಿಲ್ಲಾ ಉಪಾದ್ಯಕ್ಷ ನಿಂಗಪ್ಪಾ ನಂದೇಶ್ವರ, ಜಿಲ್ಲಾ ರೈತ ಮೋರ್ಚಾ ಉಪಾದ್ಯಕ್ಷ ಅಣ್ಣಪ್ಪಾ ಹಳ್ಳೂರ, ಮುಖಂಡರಾದ ಧರೇಪ್ಪಾ ಠಕ್ಕಣ್ಣವರ, ಅಪ್ಪಾಸಬ ಅವತಾಡೆ, ಪ್ರಭಾಕರ ಚೌವ್ಹಾಣ, ರವಿ ಪೂಜಾರಿ, ಮುರಘೇಶ ಕುಮಠಳ್ಳಿ, ಅಶೋಕ ಯಲಡಗಿ, ನಾನಾಸಾಬ ಅವತಾಡೆ, ಮಲ್ಲಿಕಾರ್ಜುನ ಅಂದಾನಿ, ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.