ಪ್ರಜಾವಾಣಿ ವಾರ್ತೆ
ಹುಕ್ಕೇರಿ: ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕಿನ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ದಿನದಿಂದ ನಡೆಯುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮತದಾನದ ಹಕ್ಕು ನೀಡುವ ಸಭೆಗಳಲ್ಲಿ ಜಾರಕಿಹೊಳಿ ಮತ್ತು ಕತ್ತಿ–ಪಾಟೀಲ್ ಗುಂಪುಗಳ ಮಧ್ಯೆ ನಿರ್ದೇಶಕರನ್ನು ತಮ್ಮತ್ತ ಸೆಳೆಯಲು ಕಸರತ್ತು ಜೋರಾಗಿ ನಡೆಯಿತು.
ಶನಿವಾರ ಸ್ಥಳೀಯ ಪಿಕೆಪಿಎಸ್ ಸಂಘದಲ್ಲಿ ಸಭೆ ಜರುಗಿ ಏಳು ಮತ (ಬ್ಯಾಂಕ್ ನಿರೀಕ್ಷಕ ಸೇರಿ) ಜಾರಕಿಹೊಳಿ ಬಣಕ್ಕೆ ಬಂದವು ಎಂದು ಠರಾವ್ ಪಾಸು ಮಾಡಲಾಯಿತು. ಸಂಘದ ಪ್ರತಿನಿಧಿಯಾಗಿ ಮತ ಚಲಾಯಿಸಲು (ಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆಗೆ) ನಿರ್ದೇಶಕ ಮತ್ತು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಸಗೌಡ ಶಿವಗೌಡ ಪಾಟೀಲ್ ಅವರಿಗೆ ಸಮ್ಮತಿಸಲಾಯಿತು. ಇದರಿಂದ ಸಂಘವು ಜಾರಕಿಹೊಳಿ ಬಣದ ತೆಕ್ಕೆಗೆ ಜಾರಿ ಹೋಯಿತು.
ಬಿಡಿಸಿಸಿ ಬ್ಯಾಂಕ್ ಚುನಾವಣೆ ಇನ್ನೂ ಒಂದು ತಿಂಗಳು ಇರುವಾಗಲೇ ಇಷ್ಟೊಂದು ಜಿದ್ದಾ ಜಿದ್ದಿ ಏರ್ಪಟ್ಟಿರುವುದನ್ನು ನೋಡಿದರೆ, ಮತ ಚಲಾಯಿಸುವ ವ್ಯಕ್ತಿಗಳ ಠಿಕಾಣಿ ಎಲ್ಲೆಲ್ಲಿ ಎಂಬುದು ನಿಗೂಢವಾಗಲಿದೆ ಎಂದು ಜನರು ಮಾತನಾಡುತ್ತಿದ್ದಾರೆ.
ಮೊದಲು ಪಿಕೆಪಿಎಸ್ ಸಂಘದ ಅಧ್ಯಕ್ಷ ತನ್ನ ನಾಲ್ಕು ಜನ ನಿರ್ದೇಶಕರ ಜೊತೆ ಹೊರಬಂದು ಇನ್ನುಳಿದ ನಿರ್ದೇಶಕರಿಗೆ ಕತ್ತಿ–ಪಾಟೀಲ್ ಬಣಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ವಿನಂತಿಸಿದರೂ ಪ್ರಯೋಜನವಾಗಲಿಲ್ಲ ಎಂದು ಮಾಧ್ಯಮದವರ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿ ಕತ್ತಿ–ಪಾಟೀಲ್ ಪರ ಜೈಕಾರ ಹಾಕಿದರು.
ಜೈಕಾರ: ನಂತರ ಜಾರಕಿಹೊಳಿ ಬೆಂಬಲಿತ ನಿರ್ದೇಶಕರು ಹೊರ ಬಂದ ನಂತರ ತಾವು ಜಾರಕಿಹೊಳಿ ಬಣಕ್ಕೆ ಬೆಂಬಲಿಸುವಾಗಿ ಮಾಧ್ಯಮದವರಿಗೆ ತಿಳಿಸಿದರು.
ಮುಖಂಡರಾದ ಕಿರಣಸಿಂಗ್ ರಜಪೂತ್,ಮೌನೇಶ್ ಪೋತದಾರ್,ಬಾರ್ಚಿ, ಸಲಿಂ ಕಳಾವಂತ, ಚಂದು ಗಂಗನ್ನವರ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಚಂದು ಪಾಟೀಲ್, ತಮ್ಮಣ್ಣಗೌಡ ಪಾಟೀಲ್, ಮಾರುತಿ ಪವಾರ್, ಬ್ಯಾಳಿ ಬಸು,ಸೋಮು ಮಠಪತಿ, ಶಿವರಾಜ ನಾಯಿಕ, ಅರವಿಂದ ದೇಶಪಾಂಡೆ, ಅಜ್ಜಪ್ಪ ಅಳವಡೆ, ಮಾಜಿ ಅಧ್ಯಕ್ಷ ಬಸವರಾಜ ನಾಯಿಕ, ಇತರರು ಇದ್ದರು.
ಪಟ್ಟಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.