ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ 52 ಪಿಕೆಪಿಎಸ್ಗಳ ಮತದಾರರೊಂದಿಗೆ, ಡಿಸಿಸಿ ಬ್ಯಾಂಕಿನ ಹುಕ್ಕೇರಿ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಬುಧವಾರ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸುವ ಮೂಲಕ ಮಾಜಿ ಸಂಸದ ರಮೇಶ ಕತ್ತಿ ತಮ್ಮ ಶಕ್ತಿ ಪ್ರದರ್ಶಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹುಕ್ಕೇರಿ ತಾಲ್ಲೂಕಿನ 52 ಪಿಕೆಪಿಎಸ್ಗಳ ಮತದಾರರು ಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿ ನೋಡಲು ಇಚ್ಛಿಸಿದರು. ಹಾಗಾಗಿ ಅವರನ್ನು ಕರೆತಂದು ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಿದ್ದೇನೆಯೇ ಹೊರತು, ನನ್ನೊಂದಿಗೆ ಮತದಾರರು ಬಂದಿರುವುದು ಶಕ್ತಿ ಪ್ರದರ್ಶನವಲ್ಲ’ ಎಂದು ತಿಳಿಸಿದರು.
‘ಹುಕ್ಕೇರಿ ಕ್ಷೇತ್ರದಲ್ಲಿ 41 ಪಿಕೆಪಿಎಸ್ಗಳ ಮತದಾರರು ನಮ್ಮೊಂದಿಗೆ ಇದ್ದಾರೆ. ಅವರೊಂದಿಗೆ ಸಭೆ ನಡೆಸಿದ್ದೇವೆ’ ಎಂಬ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆಗೆ, ‘ಇದಕ್ಕೆ ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನಾವು ಕೂಡ ನಮ್ಮ ಬೆಂಬಲಿಗರೊಂದಿಗೆ ದಿನಕ್ಕೆ ಐದರಿಂದ ಆರು ಸಭೆ ನಡೆಸುತ್ತಿದ್ದೇವೆ’ ಎಂದರು.
‘ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಮಾದರಿಯಲ್ಲೇ, ಡಿಸಿಸಿ ಬ್ಯಾಂಕ್ ಚುನಾವಣೆಯನ್ನೂ ಎದುರಿಸುತ್ತಿದ್ದೇನೆ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಬುಧವಾರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.
‘ಯಾವುದೇ ಬ್ಯಾಂಕ್ ಆಗಿದ್ದರೂ, ಉತ್ತಮ ವ್ಯಕ್ತಿಗಳ ಕೈಯಲ್ಲಿ ಇರಬೇಕು’ ಎಂದು ಪುನರುಚ್ಚರಿಸಿದರು.
‘ಎಲ್ಲ ತಾಲ್ಲೂಕುಗಳಲ್ಲೂ ಡಿಸಿಸಿ ಬ್ಯಾಂಕ್ಗೆ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಲು ಸ್ಥಳೀಯ ನಾಯಕರಿದ್ದಾರೆ. ಆಹ್ವಾನ ಬಂದರೆ, ಆಯಾ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡುತ್ತೇನೆ. ಆದರೆ, ಇಡೀ ಜಿಲ್ಲೆಯ ನಾಯಕತ್ವವನ್ನು ನಾನು ವಹಿಸಿಕೊಳ್ಳುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಕೊಲ್ಹಾಪುರದ ಕನ್ಹೇರಿಮಠದಲ್ಲಿ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು, ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳ ನಾಯಕರ ಸಭೆ ಕರೆದಿದ್ದರು. ಅಲ್ಲಿ ರಾಜಕೀಯ ವಿಷಯವಾಗಿ ಏನೂ ಚರ್ಚಿಸಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.