ಬೆಳಗಾವಿ: ಕೊಳೆಗೇರಿಗಳು ಹಾಗೂ ಅಲ್ಲಿನ ನಿವಾಸಿಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಸದಸ್ಯರು ಬುಧವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.
‘ಕೊಳೆಗೇರಿಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಹೆಚ್ಚಿನ ಹಣ ಮೀಸಲಿಡಬೇಕು. 2018ರ ವಸತಿ ಹಕ್ಕು ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯದಲ್ಲಿ 5,800 ಕೊಳೆಗೇರಿಗಳಿವೆ. 2802 ಪ್ರದೇಶಗಳನ್ನು ಕೊಳೆಗೇರಿಗಳೆಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. 2011ರ ಜನಗಣತಿಯಂತೆ ನಗರದ ಜನಸಂಖ್ಯೆಯಲ್ಲಿ ಶೇ 23ರಷ್ಟು ಜನರು ಕೊಳೆಗೇರಿಗಳಲ್ಲಿ ವಾಸವಾಗಿದ್ದಾರೆ. 70 ಲಕ್ಷದಷ್ಟು ಜನರು ವಾಸಕ್ಕೆ ಯೋಗವಲ್ಲದ ಈ ಪ್ರದೇಶಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ, ಈ ಜನರಿಗೆ ಭೂ ಒಡೆತನ ನೀಡುವ ಕೆಲಸ ನಡೆದಿಲ್ಲ’ ಎಂದು ತಿಳಿಸಿದರು.
‘ಈಗಾಗಲೇ ಘೋಷಣೆ ಮಾಡಿರುವ ಹಾಗೂ 15 ವರ್ಷ ಪೂರೈಸಿದ ಕೊಳೆಗೇರಿಗಳ ನಿವಾಸಿಗಳಿಗೆ ಭೂ ಒಡೆತನ ನೀಡಬೇಕು. ನಗರದ ಬಡವರಿಗೆ ಶೇ 25ರಷ್ಟು ಭೂಮಿ ಮೀಸಲಿಡಬೇಕು. ಅಧಿಕೃತವಾದ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ವಾಸಿಸುವವನೇ ಮನೆ ಒಡೆಯ ಕಾಯ್ದೆಯಲ್ಲಿ ಕೊಳೆಗೇರಿಗಳನ್ನು ಸೇರ್ಪಡೆಗೊಳಿಸಬೇಕು. ಅರ್ಧಕ್ಕೆ ಸ್ಥಗಿತಗೊಂಡಿರುವ ವಸತಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.