ಬೆಳಗಾವಿ: ‘ನೆರೆ ಪರಿಹಾರ ತಂತ್ರಾಂಶದಲ್ಲಿ ‘ಹಳ್ಳದ’ ಎಂಬ ಅಡ್ಡ ಹೆಸರಿನ ಎಲ್ಲ ಸರ್ವೇ ನಂಬರ್ಗಳ ಮಾಹಿತಿಯನ್ನು ದಾಖಲಿಸಬೇಕು’ ಎಂದು ಆಗ್ರಹಿಸಿ ಆ ಕುಟುಂಬದವರು ಮತ್ತು ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಇಲ್ಲಿ ಕಂದಾಯ ಸಚಿವ ಅರ್. ಅಶೋಕ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
‘ಭೂಮಿ ತಂತ್ರಾಂಶದಲ್ಲಿ ‘ಹಳ್ಳದ’ ಎಂಬ ಅಡ್ಡಹೆಸರಿನ ಪಹಣಿಗಳಲ್ಲಿ ‘ಹಳ್ಳ’ ಎಂದು ತಪ್ಪಾಗಿ ನಮೂದಿಸಲಾಗಿದೆ. ಇದರಿಂದ ಸವದತ್ತಿ ತಾಲ್ಲೂಕಿನ ಚಿಕ್ಕ ಉಳ್ಳಿಗೇರಿ ‘ಹಳ್ಳದ’ ಕುಟುಂಬದವರಿಗೆ ಪರಿಹಾರ ದೊರೆತಿಲ್ಲ. ಇದು ಖಾಸಗಿ ಜಮೀನು ಎಂದು ನಮೂದಿಸಿ, ಬೆಳೆ ಸಮೀಕ್ಷೆಗೆ ಹಾಗೂ ನೆರೆ ಪರಿಹಾರ ಪಡೆಯಲು ಅನುಕೂಲ ಮಾಡಿಕೊಡಬೇಕು’ ಎಂದು ಸಂಘದ ಸಂಚಾಲಕರಾದ ಚೂನಪ್ಪ ಪೂಜಾರಿ ಮತ್ತು ರಾಜ್ಯ ಸಲಹಾ ಸಮಿತಿ ಸದಸ್ಯೆ ಜಯಶ್ರೀ ಗುರಣ್ಣವರ ಒತ್ತಾಯಿಸಿದರು.
‘ತಪ್ಪಾಗಿ ನಮೂದಿಸಿ ರೈತ ಕುಟುಂಬಕ್ಕೆ ತೊಂದರೆ ನೀಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಕೋರಿದರು.
‘2020–21ನೇ ಸಾಲಿನಲ್ಲಿ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿ ಅನುಭವಿಸಿದವರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.