ಬೆಳಗಾವಿ: ಬೆಂಗಳೂರು– ಧಾರವಾಡ ಮಾರ್ಗದಲ್ಲಿ ಸಂಚರಿಸುತ್ತಿರುವ ರೈಲಿನ ಸೇವೆಯನ್ನು ಬೆಳಗಾವಿಯವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. ಇದಕ್ಕಾಗಿ ಸಮಯ ಹೊಂದಾಣಿಕೆ ಮಾಡಲು ಜನಪ್ರತಿನಿಧಿಗಳು ಮತ್ತು ರೈಲ್ವೆ ಅಧಿಕಾರಿಗಳಿಂದ ಕಸರತ್ತು ನಡೆದಿದೆ.
ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ರೈಲಿನ ಸೇವೆ ಆರಂಭಿಸಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇತ್ತು. 2023ರ ನವೆಂಬರ್ನಲ್ಲಿ ಬೆಂಗಳೂರು–ಬೆಳಗಾವಿ ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿಯೂ ಆಗಿತ್ತು. ಆದರೆ, ಸೇವೆ ವಿಸ್ತರಣೆಗೆ ರೈಲ್ವೆ ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿದ್ದರು. ಧಾರವಾಡ–ಬೆಳಗಾವಿ ಮಾರ್ಗದಲ್ಲಿ ತಿರುವು ಹೆಚ್ಚಿವೆ ಎಂದು ತಕರಾರು ತೆಗೆದರು.
ಈ ಮಧ್ಯೆ, 2024ರ ಸೆಪ್ಟೆಂಬರ್ನಲ್ಲಿ ಮಹಾರಾಷ್ಟ್ರದ ಪುಣೆಯಿಂದ ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಯವರೆಗೆ ವಂದೇ ಭಾರತ್ ರೈಲಿನ ಸೇವೆ ಆರಂಭಿಸಲಾಯಿತು. ಇದರಿಂದ ಆಕ್ರೋಶಗೊಂಡ ಬೆಳಗಾವಿಯವರು ರೈಲ್ವೆ ಇಲಾಖೆ ಮತ್ತು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
‘ಬೆಂಗಳೂರಿನಿಂದ ಧಾರವಾಡಕ್ಕೆ ಬರುತ್ತಿರುವ ರೈಲಿನ ಸೇವೆಯನ್ನು ಬೆಳಗಾವಿಗೆ ವಿಸ್ತರಿಸಲು ತಾಂತ್ರಿಕ ಕಾರಣ ಕೊಡುತ್ತೀರಿ. ಆದರೆ, ಪುಣೆಯಿಂದ ಬೆಳಗಾವಿ ಮಾರ್ಗವಾಗಿಯೇ ಹುಬ್ಬಳ್ಳಿಗೆ ರೈಲು ಓಡಿಸುತ್ತೀರಿ. ಈ ದ್ವಂದ್ವ ನಿಲುವು ಸರಿಯಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.
ಈ ನಡುವೆ, ‘ಬೇಕಿದ್ದರೆ ಬೆಂಗಳೂರು–ಬೆಳಗಾವಿ ಮಾರ್ಗದಲ್ಲಿ ಮತ್ತೊಂದು ವಂದೇ ಭಾರತ್ ರೈಲಿನ ಸೇವೆ ಆರಂಭಿಸಲಿ. ಆದರೆ, ಹುಬ್ಬಳ್ಳಿ–ಧಾರವಾಡ ಜನರಿಗಾಗಿ ಕಲ್ಪಿಸಿದ ಸೇವೆ ಬೆಳಗಾವಿಗೆ ವಿಸ್ತರಿಸುವುದು ಬೇಡ. ಇದರಿಂದ ರಾಜಧಾನಿಗೆ ಓಡಾಡಲು ನಮಗೆ ಅನನುಕೂಲವಾಗುತ್ತದೆ’ ಎಂದು ಹುಬ್ಬಳ್ಳಿ, ಧಾರವಾಡದ ಪ್ರಯಾಣಿಕರು ಆಕ್ಷೇಪ ಎತ್ತಿದ್ದಾರೆ.
ಹಲವರಿಂದ ಪ್ರಯತ್ನ: ಸಂಸದ ಜಗದೀಶ ಶೆಟ್ಟರ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ ಮತ್ತಿತರರು ಬೆಂಗಳೂರು–ಧಾರವಾಡ ವಂದೇ ಭಾರತ್ ರೈಲಿನ ಸೇವೆ ಬೆಳಗಾವಿಗೆ ವಿಸ್ತರಿಸಲು ಪ್ರಯತ್ನ ನಡೆಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆದಿವೆ.
2024ರ ಸೆ.16ರಂದು ಬೆಳಗಾವಿಗೆ ಬಂದಿದ್ದ ಸೋಮಣ್ಣ, ‘ಪ್ರಯಾಣಿಕರ ಬೇಡಿಕೆಯಂತೆ ಬೆಂಗಳೂರು–ಧಾರವಾಡ ‘ವಂದೇ ಭಾರತ್’ ರೈಲಿನ ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ಕೊಟ್ಟು ಹೋಗಿದ್ದಾರೆ. ಆದರೆ, ಇನ್ನೂ ಅದು ಈಡೇರದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಳಗಿನ ಅವಧಿಯಲ್ಲೇ ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲಿನ ಸೇವೆ ಸಿಕ್ಕರೆ ಬಹಳ ಅನುಕೂಲವಾಗುತ್ತದೆಅಮನ್ ನದಾಫ್ ಉದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.