ಬೆಳಗಾವಿ: ‘ಶಾಲಾ-ಕಾಲೇಜುಗಳಲ್ಲಿ ಕ್ರೀಡಾಕೂಟಗಳ ಆಯೋಜನೆಗೆ ಅನುಮತಿ ನೀಡಬೇಕು’ ಎಂದು ಒತ್ತಾಯಿಸಿ ಕ್ರೀಡಾಪಟುಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಕೊರೊನಾ ಹಾವಳಿ ತಗ್ಗಿದ್ದರಿಂದ ಶಾಲಾ-ಕಾಲೇಜು ತರಗತಿಗಳು ಆರಂಭಗೊಂಡಿವೆ. ರಾಜಕೀಯ ಸಮಾವೇಶ, ಸಭೆ– ಸಮಾರಂಭಗಳ ಆಯೋಜನೆಗೆ ಅನುಮತಿ ನೀಡಿರುವ ಸರ್ಕಾರ, ವೈರಸ್ ಹರಡುವಿಕೆ ನೆಪವೊಡ್ಡಿ ಕ್ರೀಡಾಕೂಟ ಸಂಘಟಿಸಲು ಅವಕಾಶ ನೀಡುತ್ತಿಲ್ಲ’ ಎಂದು ದೂರಿದರು.
‘ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಕ್ರೀಡಾಕೂಟಗಳ ಆಯೋಜನೆಗೆ ಅನುಮತಿ ನೀಡಬೇಕು. ಹತ್ತಾರು ಪ್ರತಿಭೆಗಳನ್ನು ಬೆಳಕಿಗೆ ತರಲು ಪ್ರಯತ್ನಿಸಬೇಕು’ ಎಂದು ಒತ್ತಾಯಿಸಿದರು.
ಸುರೇಶ, ಯೋಗೇಶ, ಸ್ವಪ್ನಿಲ್, ಸಹನಾ, ಕಾವ್ಯಾ ಇತರರಿದ್ದರು.
ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ
ಬೆಳಗಾವಿ: ತಾಲ್ಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೊಂಡಿರುವ ರಸ್ತೆ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯರು ಜಿಲ್ಲಾಧಿಕಾರಿ ಶುಕ್ರವಾರ ಮನವಿ ಸಲ್ಲಿಸಿದರು.
‘ಡಿ.21, 22ರಂದು ಗ್ರಾಮದಲ್ಲಿ ಮಸನಾಯಿ ಜಾತ್ರಾ ಮಹೋತ್ಸವ ಜರುಗಲಿದೆ. ಆದರೆ, ಇಲ್ಲಿನ ಕಾಮಗಾರಿ ಮಂದಗತಿಯಲ್ಲಿ ಸಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಇದನ್ನು ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.
ಗ್ರಾ.ಪಂ. ಅಧ್ಯಕ್ಷ ಯಲ್ಲಪ್ಪ ಪಾಟೀಲ, ಉಪಾಧ್ಯಕ್ಷೆ ಜ್ಯೋತಿ ಪಾಟೀಲ, ರಾಧಾ ಕಾಂಬಳೆ, ಪ್ರಶಾಂತ ಪಾಟೀಲ, ವೀಣಾ ಪೂಜಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.