ರಾಯಬಾಗ: ಕೃಷಿ ಇಲಾಖೆಯಿಂದ ನಡೆಸಿದ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾದ ತಮಗೆ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪಿ.ಆರ್. (ಖಾಸಗಿ ನಿವಾಸಿಗಳು)ಗಳು ಇಲ್ಲಿನ ಉಪ ತಹಶೀಲ್ದಾರ್ ಪರಮಾನಂದ ಮಂಗಸೂಳಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
‘ತಾಲ್ಲೂಕಿನ ಬೇರೆ ಬೇರೆ ಹಳ್ಳಿಗಳವರಾದ ನಾವು ಸಮೀಕ್ಷೆಯಲ್ಲಿ ಪಾಲ್ಗೊಂಡು, ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದೇವೆ. ಇದಾಗಿ ಮೂರ್ನಾಲ್ಕು ತಿಂಗಳುಗಳು ಕಳೆದಿವೆ. ಆದರೆ ಇದುವರೆಗೂ ನಮಗೆ ನೀಡಬೇಕಾದ ಸಂಬಳವನ್ನು ಕೊಟ್ಟಿಲ್ಲ. ನಮ್ಮ ಒತ್ತಾಯದ ಮೇರೆಗೆ ₹ 100, ₹ 200, ₹ 500 ಹಾಗೂ ₹ 1 ಸಾವಿರವನ್ನು ಜಮಾ ಮಾಡಿದ್ದಾರೆ. ಬಹುತೇಕರಿಗೆ ಸಂಪೂರ್ಣವಾಗಿ ವೇತನ ಸಿಕ್ಕಿಲ್ಲ. ಅಲೆದಾಡಿದರೂ 30ರಿಂದ 40 ಪಿ.ಆರ್.ಗಳಿಗೆ ಹಣ ಬಂದಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ಖುದ್ದಾಗಿ ವಿಚಾರಿಸಿದಾಗ, ಹಾರಿಕೆಯ ಉತ್ತರಗಳನ್ನು ನೀಡಿದ್ದಾರೆ. ಕೋವಿಡ್–19 ಭೀತಿಯಲ್ಲೂ ಕೆಲಸ ಮಾಡಿದ ನಮಗೆ ನೆರವಾಗದಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೂಡಲೇ ನ್ಯಾಯ ದೊರಕಿಸಿಕೊಡಬೇಕು’ ಎಂದು ಕೋರಿದರು.
ದರ್ಶನ ಕಾಂಬ್ಳೆ, ನಿಂಗಪ್ಪ ಕರಿಹೊಳೆ, ಮಿಥುನ ಕಾಂಬಳೆ, ನಾಗಪ್ಪ ಧುಮಾಳೆ, ಮಹಾವೀರ ಹಂಜಿ, ಮಾಯಪ್ಪ ಜಗದಾಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.